ADVERTISEMENT

ನಟ ಶ್ರೀನಗರ ಕಿಟ್ಟಿಯ ಭಾವ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 19:30 IST
Last Updated 4 ಡಿಸೆಂಬರ್ 2013, 19:30 IST

ಬೆಂಗಳೂರು: ಚಿತ್ರನಟ ಶ್ರೀನಗರ ಕಿಟ್ಟಿ ಅವರ ಭಾವ ಶ್ರೀಕಂಠಯ್ಯ (60) ಅವರು ಬುಧವಾರ ಸಂಜೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಿರಿನಗರ ಸಮೀಪದ ವೀರಭದ್ರನಗರದ ಏಳನೇ ಅಡ್ಡರಸ್ತೆಯಲ್ಲಿ ವಾಸವಾಗಿದ್ದ ಅವರು, ಸಂಗೀತ ಕಲಾವಿದರಾಗಿದ್ದರು.

ಸಂಜೆ ಆರು ಗಂಟೆ ಸುಮಾರಿಗೆ ತಮ್ಮ ಕೋಣೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ಕುಟುಂಬ ಸದಸ್ಯರು ಕೋಣೆಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಶ್ರೀಕಂಠಯ್ಯ, ಶ್ರೀನಗರ ಕಿಟ್ಟಿ ಅವರ ಹಿರಿಯ ಸೋದರಿ ಉಮಾದೇವಿ ಅವರ ಪತಿ. ಪತ್ನಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಾರಣ ಅವರು ಖಿನ್ನತೆಗೆ ಒಳಗಾಗಿದ್ದರು. ‘ಪತ್ನಿಗೆ ಚಿಕಿತ್ಸೆ ನೀಡಿದ ವೈದ್ಯರು, ಆಕೆಯನ್ನು ಬದುಕಿಸುವುದು ಕಷ್ಟ ಎಂದು ಹೇಳಿದ್ದಾರೆ.

ಪತ್ನಿಯ ಸಾವನ್ನು ನೋಡಲು ಸಾಧ್ಯವಿಲ್ಲ. ಹೀಗಾಗಿ ನಾನೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಶ್ರೀಕಂಠಯ್ಯ ಪತ್ರ ಬರೆದಿಟ್ಟಿದ್ದಾರೆ ಎಂದು ಗಿರಿನಗರ ಪೊಲೀಸರು ಮಾಹಿತಿ ನಿಡಿದರು. ಪ್ರಕರಣ ದಾಖಲಾಗಿದೆ. 

ಪ್ರತ್ಯೇಕ ಅಪಘಾತದಲ್ಲಿ ಮೂರು ಸಾವು: ಮಾಗಡಿ ಮುಖ್ಯರಸ್ತೆ­ಯಲ್ಲಿ ಮಂಗಳವಾರ ರಾತ್ರಿ ಬಿಎಂಟಿಸಿ ಬಸ್‌ ಡಿಕ್ಕಿ ಹೊಡೆದು ನಾಗರಾಜ್‌ (40) ಎಂಬುವರು ಸಾವ­ನ್ನ­ಪ್ಪಿದ್ದು, ಬಳ್ಳಾರಿ ರಸ್ತೆಯ ಚಿಕ್ಕಜಾಲ ಸಮೀಪ ಬೈಕ್‌ ಗುದ್ದಿ ಬೈರಶೆಟ್ಟಿ (55) ಎಂಬು­ವರು ಮೃತಪಟ್ಟಿದ್ದಾರೆ. ಮೈಸೂರು ರಸ್ತೆಯಲ್ಲಿ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ತಾಲ್ಲೂ­­ಕಿನ ನಾಗರಾಜ್‌, ಪತ್ನಿ ಮತ್ತು ಮಕ್ಕಳೊಂದಿಗೆ ಲಗ್ಗೆರೆಯಲ್ಲಿ ವಾಸವಾ­ಗಿದ್ದರು. ಲಗ್ಗೆರೆಯಲ್ಲಿನ ಇಂಡಿಯಾ ಇನ್ಫೊ­ಲೈನ್‌ (ಐಐಎಫ್‌ಎಲ್‌) ಗೋಲ್ಡ್‌ ಲೋನ್‌ ಸಂಸ್ಥೆಯಲ್ಲಿ ಭದ್ರತಾ ಸಿಬ್ಬಂದಿ­ಯಾಗಿದ್ದ ಅವರು ಸ್ನೇಹಿತನನ್ನು ಭೇಟಿ­ಯಾ­ಗಲು ಕೊಟ್ಟಿಗೆಪಾಳ್ಯಕ್ಕೆ ಬಂದಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.

ಅವರು ಭಿಕ್ಷುಕರ ಪುನರ್ವಸತಿ ಕೇಂದ್ರದ ಎದುರು ರಸ್ತೆ ದಾಟುತ್ತಿದ್ದಾಗ ಬಸ್‌ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಅವರನ್ನು ವಿಕ್ಟೋ­ರಿಯಾ ಆಸ್ಪತ್ರೆಗೆ ದಾಖಲಿಸ­ಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಬಸ್‌, ಸುಂಕದಕಟ್ಟೆಯಿಂದ ಮೆಜೆಸ್ಟಿಕ್‌ಗೆ ಹೋಗುತ್ತಿತ್ತು. ಕಾಮಾಕ್ಷಿ­ಪಾಳ್ಯ ಸಂಚಾರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಚಾಲಕ­ನನ್ನು ಬಂಧಿಸಿದ್ದಾರೆ.

ADVERTISEMENT

ಮತ್ತೊಂದು ಪ್ರಕರಣ: ಆಂಧ್ರಪ್ರದೇಶ ಮೂಲದ ಬೈರಶೆಟ್ಟಿ, ಕುಟುಂಬ ಸದಸ್ಯ­ರೊಂದಿಗೆ ಚಿಕ್ಕಜಾಲ ಬಳಿಯ ಮೀನು­ಕುಂಟೆ ಹೊಸೂರಿನಲ್ಲಿ ನೆಲೆಸಿದ್ದರು. ಅಮೃತಹಳ್ಳಿಯಲ್ಲಿರುವ ಕಾಮ­ಧೇನು ಸೆಕ್ಯುರಿಟಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಅವರನ್ನು ಚಿಕ್ಕಜಾಲದ ಖಾಸಗಿ ಕಂಪೆನಿಯೊಂದರ ಭದ್ರತಾ ಕೆಲಸಕ್ಕೆ ನಿಯೋಜಿಸಲಾಗಿತ್ತು.

ಅವರು ಕೆಲಸ ಮುಗಿಸಿಕೊಂಡು ಸರ್ವಿಸ್‌ ರಸ್ತೆಯಲ್ಲಿ ಮನೆಯ ಕಡೆಗೆ ನಡೆದು ಹೋಗುತ್ತಿದ್ದಾಗ ಎದುರುಗಡೆ­ಯಿಂದ ಬಂದ ಬೈಕ್‌ ಡಿಕ್ಕಿ ಹೊಡೆದಿದೆ. ಈ ವೇಳೆ ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಕೆಂಗೇರಿ: ಮೈಸೂರು ರಸ್ತೆಯ ಮೈಲಸಂದ್ರ ಜಂಕ್ಷನ್‌ ಬಳಿ ಮೃತಪಟ್ಟಿರುವ ವ್ಯಕ್ತಿಯ ವಯಸ್ಸು ಸುಮಾರು 30 ವರ್ಷ. ಆದರೆ, ಅವರ ಗುರುತು ಪತ್ತೆಯಾಗಿಲ್ಲ. ರಸ್ತೆ ದಾಟುತ್ತಿದ್ದ ಅವರಿಗೆ ವಾಹನ ಡಿಕ್ಕಿ ಹೊಡೆದಿರುವುದರಿಂದ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನ­ಪ್ಪಿದ್ದಾರೆ. ಘಟನೆ ನಂತರ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಕೆಂಗೇರಿ ಸಂಚಾರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.