
ಬೆಂಗಳೂರು: ಎರಡು ತಿಂಗಳ ಹಿಂದೆ ಅಗ್ನಿ ಅನಾಹುತದಲ್ಲಿ ಸಂಪೂರ್ಣ ಹಾನಿಗೀಡಾಗಿ ಸಂಕಷ್ಟಕ್ಕೆ ಗುರಿಯಾಗಿದ್ದ ನಗರದ ರಸೆಲ್ ಮಾರುಕಟ್ಟೆಯ ವ್ಯಾಪಾರಿಗಳ ಮೊಗದಲ್ಲಿ ಸಂತಸ ಮೂಡಿದೆ. ರಾಜ್ಯ ಸರ್ಕಾರದ ಪರಿಹಾರ ಮೊತ್ತ ಹಾಗೂ ಸ್ಥಳೀಯರ ನೆರವಿನಿಂದ ಮಾರುಕಟ್ಟೆಯ ಅಂಗಡಿಗಳ ನವೀಕರಣ ನಡೆಸಲಾಗಿದ್ದು, ಸೋಮವಾರದಿಂದಲೇ ವ್ಯಾಪಾರ ಚಟುವಟಿಕೆ ಆರಂಭವಾಗಿದೆ.
ಫೆಬ್ರುವರಿ 25 ರಂದು ಸಂಭವಿಸಿದ ಅಗ್ನಿ ಅನಾಹುತದಲ್ಲಿ ರಸೆಲ್ ಮಾರುಕಟ್ಟೆಯ 126 ಅಂಗಡಿಗಳು ಸಂಪೂರ್ಣ ಸುಟ್ಟು ಹೋಗಿದ್ದವು. ದುರಂತದ ಬಳಿಕ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸ್ಥಳಕ್ಕೆ ಭೇಟಿ ನೀಡಿ ರೂ 33 ಲಕ್ಷ ಪರಿಹಾರ ಘೋಷಿಸಿದ್ದರು.
ಪರಿಹಾರದ ಜತೆಗೆ ಬೇರೆ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ರೂ 1.5 ಕೋಟಿ ವೆಚ್ಚ ಮಾಡಿ ಅಂಗಡಿಗಳನ್ನು ನವೀಕರಣ ಮಾಡಲಾಯಿತು. ಸೋಮವಾರ ಅಂಗಡಿಗಳೆಲ್ಲ ತೆರೆದಿದ್ದವು. ಕೆಲವೇ ದಿನಗಳಲ್ಲಿ ಗೋಡೌನ್ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ವ್ಯಾಪಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.
`ಅಗ್ನಿ ಅನಾಹುತ ಸಂಭವಿಸಿದ ದಿನದಂದು ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದು ಇನ್ನೂ ಸಂಪರ್ಕ ನೀಡಿಲ್ಲ. ಅನಾಹುತ ಸಂಭವಿಸಿದಾಗ ಮಾರುಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯ ಮಾಡಿಕೊಡುವಂತೆ ಬಿಬಿಎಂಪಿ ಅಧಿಕಾರಿಗಳ ಬಳಿ ಮನವಿ ಮಾಡಿದ್ದೆವು. ಆದರೆ, ಪಾಲಿಕೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ವ್ಯಾಪಾರಿಗಳೆಲ್ಲಾ ಸೇರಿಕೊಂಡು ಮಾರುಕಟ್ಟೆಯನ್ನು ಸ್ವಚ್ಛ ಮಾಡಿದ್ದೆವು. ಬಳಿಕ ನಾವೇ ಮಾರುಕಟ್ಟೆಯ ನವೀಕರಣಕ್ಕೆ ಮುಂದಾದೆವು. ಪರಿಹಾರ ಪಡೆಯಲು ಸ್ಥಳೀಯ ಶಾಸಕರು ಹಾಗೂ ಪಾಲಿಕೆ ಸದಸ್ಯರು ನೆರವು ನೀಡಿದರು~ ಎಂದು ರಸೆಲ್ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ನಸೀರ್ ಅಹಮ್ಮದ್ `ಪ್ರಜಾವಾಣಿ~ಗೆ ತಿಳಿಸಿದರು.
`ಮಾರುಕಟ್ಟೆಯ ವ್ಯಾಪಾರಿಗಳ ನಿಯೋಗ ಕಳೆದ ಶುಕ್ರವಾರ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರನ್ನು ಭೇಟಿ ಮಾಡಿ ಮಾರುಕಟ್ಟೆಗೆ ವಿದ್ಯುತ್ ಸಂಪರ್ಕಕ್ಕೆ ಒದಗಿಸುವಂತೆ ಆಗ್ರಹಿಸಿತ್ತು. ವಿದ್ಯುತ್ ಸಂಪರ್ಕ ನೀಡಲು ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಸೋಮವಾರ ಸಂಜೆ ವರೆಗೂ ಬೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಬೇರೆ ದಾರಿ ಕಾಣದೆ ಮಾರುಕಟ್ಟೆಯಲ್ಲಿ ಸೋಮವಾರ ಜನರೇಟರ್ ಸಹಾಯ ಪಡೆದು ವ್ಯಾಪಾರ ನಡೆಸಲಾಯಿತು.
ಒಂದೆರಡು ದಿನಗಳಲ್ಲಿ ವಿದ್ಯುತ್ ಸಂಪರ್ಕ ದೊರೆಯುವ ನಿರೀಕ್ಷೆ ಇದೆ~ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.
`ರಸೆಲ್ ಮಾರುಕಟ್ಟೆಯಲ್ಲಿನ ಕೆಲವು ಅಂಗಡಿಗಳ ದುರಸ್ತಿಗಾಗಿ ಮಾರ್ಚ್ ಕೊನೆಯ ವಾರದಲ್ಲಿ ಬಿಬಿಎಂಪಿ ಸುತ್ತೋಲೆ ಕಳುಹಿಸಿತ್ತು. ಆದರೆ, ಅಷ್ಟರಲ್ಲಿ ಅಂಗಡಿಗಳ ನವೀಕರಣ ಕಾರ್ಯ ಮುಕ್ತಾಯವಾಗಿತ್ತು~ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.