ಬೆಂಗಳೂರು: ವಿಶ್ವ ಪರಿಸರ ದಿನದಂದೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿಬ್ಬಂದಿ ಪದ್ಮನಾಭ ನಗರದಲ್ಲಿ ಮರವೊಂದನ್ನು ಕಡಿದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪದ್ಮನಾಭ ನಗರ ವಾರ್ಡ್ನ 22ನೇ ಮುಖ್ಯ ರಸ್ತೆಯ 14ನೇ ಅಡ್ಡರಸ್ತೆಯಲ್ಲಿದ್ದ ಗುಲ್ಮೊಹರ್ ಮರವನ್ನು ಸೋಮವಾರ ಮಧ್ಯಾಹ್ನ ಧರೆಗೆ ಉರುಳಿಸಿದ್ದಾರೆ.
ಮರವನ್ನೇಕೆ ಕಡಿಯುತ್ತಿದ್ದೀರಿ ಎಂದು ಸ್ಥಳೀಯರು ಪ್ರಶ್ನಿಸಿದಾಗ, ‘ಜೋರು ಮಳೆಗೆ ಮರ ಬೀಳುವ ಸ್ಥಿತಿಯಲ್ಲಿದೆ. ಹಾಗಾಗಿ ಕಡಿಯುತ್ತಿದ್ದೇವೆ’ ಎಂದು ಪಾಲಿಕೆ ಸಿಬ್ಬಂದಿ ಕಾರಣ ನೀಡಿದ್ದಾರೆ.
‘ನಾನು ಕಂಡಂತೆ ಮರ ಗಟ್ಟಿಮುಟ್ಟಾಗಿಯೇ ಇತ್ತು. ಅದು ಬೀಳುವ ಸ್ಥಿತಿಯಲ್ಲಿದ್ದರೆ ಅದರ ಕೊಂಬೆಗಳನ್ನು ಮಾತ್ರ ಕತ್ತರಿಸಬಹುದಿತ್ತು. ರಸ್ತೆ ಬದಿಯಲ್ಲಿರುವ ಕಟ್ಟಡದ ಸೌಂದರ್ಯ ಜನರಿಗೆ ಕಾಣಲು ಮರ ಅಡ್ಡವಾಗಿತ್ತೆಂದು ಕಡಿಸಿದ್ದಾರೆ’ ಎಂದು ಸ್ಥಳೀಯರೊಬ್ಬರು ಆರೋಪಿಸಿದರು.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಪಾಲಿಕೆ ಅರಣ್ಯ ವಿಭಾಗದ ಅಧಿಕಾರಿಯನ್ನು ಸಂಪರ್ಕಿಸಿದಾಗ, ‘ನಗರದಲ್ಲಿ ಮಳೆ ಶುರುವಾದ ಮೇಲೆ ವಲಯಗಳ ಜಂಟಿ ಆಯುಕ್ತರು ಮತ್ತು ಮುಖ್ಯ ಎಂಜಿನಿಯರ್ಗಳ ಉಸ್ತುವಾರಿಯಲ್ಲಿ ಮರಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಆಯುಕ್ತರಿಂದ ಆದೇಶ ಬಂದಿರಬಹುದೆಂದು ನಾವು ಸುಮ್ಮನಿದ್ದೆವು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.