ADVERTISEMENT

‘ನೀರಿನ ಸದ್ಬಳಕೆಯಿಂದ ಕೃಷಿಯಲ್ಲಿ ಸುಧಾರಣೆ’

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 20:12 IST
Last Updated 23 ಮಾರ್ಚ್ 2018, 20:12 IST
ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ರೈತರು–ಪ್ರಜಾವಾಣಿ ಚಿತ್ರ
ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ರೈತರು–ಪ್ರಜಾವಾಣಿ ಚಿತ್ರ   

ಬೆಂಗಳೂರು: ನೀರನ್ನು ಸದ್ಬಳಕೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ. ಭವಿಷ್ಯದಲ್ಲಿ ಒಕ್ಕಲುತನವನ್ನು ಉಳಿಸಿಕೊಳ್ಳಬೇಕಾದರೆ ನೀರನ್ನು ಮಿತವಾಗಿ ಬಳಸಬೇಕು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಸಲಹೆ ನೀಡಿದರು.

ಕೃಷಿ ಭಾಗ್ಯ ಯೋಜನೆಯಡಿ ಪ್ರಯೋಜನ ಪಡೆದ ‘ಯಶಸ್ವಿ ರೈತರ ಅನುಭವ ವಿನಿಮಯ– ರಾಜ್ಯಮಟ್ಟದ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.

‘ವಿದ್ಯುತ್‌ ಸಮಸ್ಯೆ, ಬೆಳೆಗಳ ಬೆಲೆ ನಿಗದಿ ಸಮಸ್ಯೆಗಿಂತ ರೈತರಿಗೆ ನೀರಿನ ಕೊರತೆ ದೊಡ್ಡ ಸಮಸ್ಯೆಯಾಗಿದೆ. ನಮ್ಮ ರಾಜ್ಯದಲ್ಲಿರುವ ನೀರನ್ನೇ ಸರಿಯಾಗಿ ಬಳಸಿದರೆ ನೀರಾವರಿ ಪ್ರದೇಶವನ್ನು ಎರಡು ಪಟ್ಟು ಹೆಚ್ಚಿಸಬಹುದು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ರಾಯಚೂರು ಜಿಲ್ಲೆಯ ರೈತ ಬಸವರಾಜು ಶರಣಪ್ಪ ಗೌಡ ಮಾತನಾಡಿ, ‘ನಾನು ಕೃಷಿ ಭಾಗ್ಯ ಯೋಜನೆಯ ಫಲಾನುಭವಿ. ಕೃಷಿಯಿಂದ ದೂರ ಉಳಿಯಬೇಕು ಎಂದು ಯೋಚಿಸಿದ್ದೆ. ಆ ಹೊತ್ತಿನಲ್ಲೇ ಈ ಯೋಜನೆ ಬಂತು. ನಾನು ಇದರಿಂದ ಉತ್ತಮ ಆದಾಯ ಗಳಿಸುತ್ತಿದ್ದೇನೆ. ಆದರೆ, ಮಾರುಕಟ್ಟೆಯಲ್ಲಿ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಹಗಲು ವೇಳೆ ವಿದ್ಯುತ್‌ ನೀಡಬೇಕು. ಈ ಯೋಜನೆಯಡಿ ಸೋಲಾರ್‌ ಸೌಲಭ್ಯ ನೀಡಿದರೆ ರೈತರಿಗೆ ಹೆಚ್ಚು ಉಪಯೋಗವಾಗುತ್ತದೆ’ ಎಂದು ಮನವಿ ಮಾಡಿದರು.

ಹಾವೇರಿಯ ಮಲ್ಲೇಶಪ್ಪ ಕಲ್ಲಪ್ಪ ತಳವಾರ ಮಾತನಾಡಿ, ‘ಸರ್ಕಾರ ನನಗೆ ಕೃಷಿ ಹೊಂಡ ನಿರ್ಮಿಸಿಕೊಟ್ಟಿದ್ದು, ನೀರಿನ ಸಮಸ್ಯೆ ಕಡಿಮೆಯಾಗಿದೆ. ಆದರೆ, ನಾವು ಬೆಳೆದ ಬೆಳೆಗಳನ್ನು ನಮ್ಮ ಜಿಲ್ಲೆಯಲ್ಲಿಯೇ ಮಾರಾಟ ಮಾಡಲು ಸರ್ಕಾರ ಮಾರುಕಟ್ಟೆ ನಿರ್ಮಿಸಬೇಕು. ರೈತರನ್ನು ಕಡೆಗಣಿಸಿರುವ ಸರ್ಕಾರ
ಗಳು ಹಸಿವು ಮುಕ್ತ ಭಾರತ ಮಾಡಲು ಹೊರಟಿವೆ. ದೇಶದ ಹಸಿವು ನೀಗಿಸಲು ನಾವು ಸಿದ್ಧವಿದ್ದೇವೆ. ಆದರೆ ನಮಗೆ ಉತ್ತಮ ಬೀಜ, ನೀರು ಹಾಗೂ ವಿದ್ಯುತ್‌ ಸೌಲಭ್ಯ ಮಾಡಿಕೊಟ್ಟರೆ ಸಾಕು’ ಎಂದರು.

2.30 ಲಕ್ಷ -ರಾಜ್ಯದಲ್ಲಿ ನಿರ್ಮಿಸಿರುವ ಕೃಷಿಹೊಂಡಗಳು

2,460 -ನಿರ್ಮಿಸಿರುವ ಪಾಲಿಹೌಸ್‌ಗಳು

₹ 2040 ಕೋಟಿ -ಈ ಯೋಜನೆಗೆ ಮಾಡಿರುವ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.