ADVERTISEMENT

ಪಟಾಲಮ್ಮ ದೇವಿ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 19:30 IST
Last Updated 10 ಏಪ್ರಿಲ್ 2012, 19:30 IST

ಯಲಹಂಕ: ಬೆಂಗಳೂರು ಉತ್ತರ ತಾಲ್ಲೂಕಿನ ಅದ್ದಿಗಾನಹಳ್ಳಿ ಗ್ರಾಮದಲ್ಲಿ  ಪಟಾಲಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರದಿಂದ ಒಂದು ವಾರ ಕಾಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಬುಧವಾರ ಬೆಳಿಗ್ಗೆ 11ಕ್ಕೆ ಅದ್ದಿಗಾನಹಳ್ಳಿ, ಸಾದೇನಹಳ್ಳಿ ಹಾಗೂ ತರಹುಣಿಸೆ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ರಥೋತ್ಸವ ನಡೆಯಲಿದ್ದು, ಈ ಮೂರೂ ಗ್ರಾಮಗಳಿಂದ ಹೊರಟು ಬರುವ ರಥಗಳು ಪಟಾಲಮ್ಮ ದೇವಸ್ಥಾನದ ಬಳಿ ಬಂದು ಸೇರಲಿವೆ.

ಮಾರಗೊಂಡನಹಳ್ಳಿ, ಅಗ್ರಹಾರ, ತಿಮ್ಮಸಂದ್ರ, ನಾಗದಾಸನಹಳ್ಳಿ, ರಾಜಾನುಕುಂಟೆ ಹಾಗೂ ಚೊಕ್ಕನಹಳ್ಳಿ ಗ್ರಾಮಗಳ ಪ್ರತಿ ಮನೆಗಳಿಂದ ಮಹಿಳೆಯರು ತಂಬಿಟ್ಟು ಮತ್ತು ಬೆಲ್ಲದ ಆರತಿಯನ್ನು ಹೊತ್ತು ಮೆರವಣಿಗೆಯಲ್ಲಿ ಬರಲಿದ್ದಾರೆ.

ಎಲ್ಲಾ ಗ್ರಾಮಗಳ ಜನರು ದೇವಿಯಲ್ಲಿ ತಾವು ಮಾಡಿಕೊಂಡಿರುವ ಹರಕೆ ತೀರಿಸಲು ಗುರುವಾರ ಮಧ್ಯಾಹ್ನ 3.30ರ ನಂತರ ಬಾಯಿಗೆ ಬೀಗ ಚುಚ್ಚುವ ಕಾರ್ಯಕ್ರಮ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಆಚಾರರು ಮನೆ ಮನೆಗೆ ತೆರಳಿ, ಹರಕೆ ಹೊತ್ತುಕೊಂಡಿರುವವರ ಬಾಯಿಗೆ ಬೀಗ ಚುಚ್ಚಿ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಗುತ್ತದೆ. ಸಂಜೆ ದೇವಿಗೆ ಆರತಿ ಬೆಳಗಿದ ನಂತರ ಬಾಯಿ ಬೀಗಗಳನ್ನು ತೆಗೆಯಲಾಗುತ್ತದೆ.

ಶುಕ್ರವಾರ ಅದ್ದಿಗಾನಹಳ್ಳಿ ಗ್ರಾಮದಲ್ಲಿ ದೇವಿಯ ಹೂವಿನ ಪಲ್ಲಕ್ಕಿ ಉತ್ಸವ ನಡೆಯಲಿದೆ. ಪಟಾಲಮ್ಮ ದೇವಿಯ ಬಗ್ಗೆ ಈ ಭಾಗದ ಜನರು ವಿಶೇಷವಾದ ನಂಬಿಕೆಯನ್ನಿಟ್ಟಿದ್ದು, ತಾವು ಯಾವುದೇ ಶುಭ ಕಾರ್ಯಗಳನ್ನು ಆರಂಭಿಸಬೇಕಾದರೂ  ದೇವಿಗೆ ಮೊದಲು ಪೂಜೆ ಸಲ್ಲಿಸಿದರೆ  ಕಾರ್ಯಗಳು ಯಶಸ್ವಿಯಾಗುತ್ತವೆ ಎಂಬ ಪ್ರತೀತಿ ಹಿಂದಿನಿಂದಲೂ ಬಂದಿದೆ.

ಬೆಂಗಳೂರು ಉತ್ತರ ತ್ಲ್ಲಾಲೂಕು, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕುಗಳ ಸಾವಿರಾರು ಜನ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುತ್ತಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.