ಬೆಂಗಳೂರು: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ‘ಏಕತಾ ಪ್ರತಿಮೆ’ ನಿರ್ಮಾಣದ ಅಂಗವಾಗಿ ಡಿ.15ಕ್ಕೆ ದೇಶದ ಎಲ್ಲ ಜಿಲ್ಲೆಗಳಲ್ಲಿ ‘ಏಕತಾ ಓಟ’ ಆಯೋಜಿಸಲಾಗಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಏಕತಾ ಟ್ರಸ್ಟ್ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗುಜರಾತ್ ಇಂಧನ ಸಚಿವ ಸೌರಭಭಾಯಿ ಪಟೇಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿಮೆ ನಿರ್ಮಾಣದ ಕುರಿತು ಪ್ರಚಾರ ಕೈಗೊಳ್ಳಲು ಗುಜರಾತ್ ರಾಜ್ಯದ ನಿಯೋಗದೊಂದಿಗೆ ಅವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ. 182 ಮೀಟರ್ ಎತ್ತರದ ಪ್ರತಿಮೆಯನ್ನು ಗುಜರಾತ್ನ ನರ್ಮದಾ ನದಿಯ ಸಮೀಪದ ಸಾಧು ಬೆಟ್ಟದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಇದು ಜಗತ್ತಿನಲ್ಲೇ ಅತ್ಯಂತ ಎತ್ತರವಾದ ಪ್ರತಿಮೆಯಾಗಲಿದೆ. ಇದಕ್ಕಾಗಿಯೇ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಏಕತಾ ಟ್ರಸ್ಟ್ ರಚಿಸಿದ್ದು ಈ ನಿರ್ಮಾಣ ಕಾರ್ಯದಲ್ಲಿ ಜನರ ಪಾಲ್ಗೊ-ಳ್ಳುವಿಕೆ ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಏಕತಾ ಓಟವೂ ಇದರ ಭಾಗವಾಗಿದೆ ಎಂದರು.
ಪಟೇಲ್ ಅವರ ಪುಣ್ಯತಿಥಿಯಾದ ಡಿ.15ರಂದು ಎಲ್ಲ ಜಿಲ್ಲೆಗಳಲ್ಲಿ ‘ಏಕತಾ ಓಟ’ ನಡೆಯಲಿದೆ. ಪ್ರತಿಯೊಂದು ಗ್ರಾಮಕ್ಕೂ ಏಕತಾ ಸಂದೇಶ ತಲುಪಿಸುವುದು ಓಟದ ಉದ್ದೇಶವಾಗಿದೆ. ವಡೋದರಾದಲ್ಲಿ ನರೇಂದ್ರ ಮೋದಿ ಓಟಕ್ಕೆ ಚಾಲನೆ ನೀಡಲಿದ್ದು, ಸುಮಾರು 1.5 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ದೇಶದ ಒಂದು ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ನಡೆಯಲಿರುವ ಈ ಓಟ ಹೊಸ ದಾಖಲೆ ಸೃಷ್ಟಿಸಲಿದೆ ಎಂದು ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.