ADVERTISEMENT

ಪದಾತಿ ದಳದ ಸೇವೆ: ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:40 IST
Last Updated 27 ಅಕ್ಟೋಬರ್ 2011, 19:40 IST

ಬೆಂಗಳೂರು: `ದೇಶದ ಆಂತರಿಕ ಭದ್ರತೆಗೆ ವಿಚ್ಛಿದ್ರಕಾರಿ ಶಕ್ತಿಗಳಿಂದ ಧಕ್ಕೆ ಉಂಟಾಗುವ ಸಂದರ್ಭದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಹೋರಾಡುವ ಪದಾತಿ ದಳದ ಸೇವೆ ಅಪ್ರತಿಮವಾದುದು~ ಎಂದು ಮೇಜರ್ ಜನರಲ್ ಪಿ.ಎಸ್. ರವೀಂದ್ರನಾಥ್ ಗುರುವಾರ ಇಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಪ್ಯಾರಾಚೂಟ್ ರೆಜಿಮೆಂಟ್‌ನ ತರಬೇತಿ ಕೇಂದ್ರದ ಯುದ್ಧ ಸ್ಮಾರಕದ ಬಳಿ ಪದಾತಿ ದಳದ ದಿನಾಚರಣೆ ಅಂಗವಾಗಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ ನಂತರ ನಡೆದ ವಿಶೇಷ ಸೈನಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು.

`ರಾಷ್ಟ್ರಕ್ಕೆ ಪದಾತಿ ದಳ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾದುದು. ಇನ್ನು ಮುಂದೆಯೂ ರಾಷ್ಟ್ರದ ಆಂತರಿಕ ಭದ್ರತೆಗೆ ಎದುರಾಗುವ ಎಂತಹುದೇ ಸವಾಲುಗಳನ್ನು ಎದುರಿಸಲು ಪದಾತಿ ದಳ ಸರ್ವ ರೀತಿಯಲ್ಲೂ ಸಜ್ಜಾಗಿರಬೇಕು~ ಎಂದರು.

`ಇದೇ ರೀತಿಯ ಆತ್ಮಸ್ಥೈರ್ಯದಿಂದ ಉತ್ತಮ ಕೆಲಸ ನಿರ್ವಹಿಸಬೇಕು~ ಎಂದೂ ಅವರು ಕರೆ ನೀಡಿದರು.
ಬ್ರಿಗೇಡಿಯರ್ ಎ. ದತ್ತ, ನಿವೃತ್ತ ಮೇಜರ್ ಜನರಲ್ ಆರ್‌ಪಿಆರ್‌ಸಿ ನಾಯ್ಡು ಮತ್ತಿತರರು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.

1947ರ ಅಕ್ಟೋಬರ್ 27ರಂದು ಕಾಶ್ಮೀರ ಕಣಿವೆ ಪ್ರವೇಶಿಸಿದ ನುಸುಳುಕೋರರನ್ನು ಪದಾತಿ ದಳ ಹಿಮ್ಮೆಟ್ಟಿಸಿತ್ತು.
ಅದರ ದ್ಯೋತಕವಾಗಿ ಪ್ರತಿ ವರ್ಷ ಅ. 27ರಂದು ಪದಾತಿ ದಳದ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಕಾರ್ಯಕ್ರಮದ ಅಂಗವಾಗಿ ಹುತಾತ್ಮ ಯೋಧರ ಗೌರವಾರ್ಥ ಎರಡು ನಿಮಿಷ ಮೌನ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.