ಬೆಂಗಳೂರು: ‘ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಮಡಿವಾಳರ ಸಂಘನಗರದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲೂ ಮಡಿವಾಳ ಸಮುದಾಯದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಈ ವಸತಿ ನಿಲಯಗಳಲ್ಲಿ ಸೀಟು ದೊರೆಯದಿದ್ದರೆ, ‘ವಿದ್ಯಾಸಿರಿ’ ಯೋಜನೆಯಡಿ ರೂ15 ಸಾವಿರ ಆರ್ಥಿಕ ಸಹಾಯ ಒದಗಿಸಲಾಗುವುದು’ ಎಂದರು.
‘ಮುಂದಿನ ಸಾಲಿನ ಬಜೆಟ್ನಲ್ಲಿ ಮಡಿವಾಳ ಹಾಗೂ ಸವಿತಾ ಸಮಾಜಕ್ಕೆ ವಿಶೇಷ ಪ್ಯಾಕೇಜ್ ಒದಗಿಸಲಾಗುವುದು. ಈ ಎರಡು ಸಮುದಾಯದ ಜನರು ಕುಲಕಸುಬನ್ನು ಮುಂದುವರಿಸಬೇಕು’ ಎಂದು ಸಲಹೆ ನೀಡಿದರು.
ಸಕಾರತ್ಮಾಕ ಸ್ಪಂದನೆ: ಮಡಿವಾಳ ಜಯಂತಿಯನ್ನು ಸರ್ಕಾರದಿಂದ ಅಧಿಕೃತವಾಗಿ ಆಚರಿಸುವುದು, ಮಡಿವಾಳ ಮಾಚಿದೇವ ಪೀಠ ಸ್ಥಾಪನೆ ಹಾಗೂ ಆಂಧ್ರಪ್ರದೇಶ ಮಾದರಿಯಲ್ಲಿ ದೋಭಿ ಅಭಿವೃದ್ಧಿ ಪ್ರಾಧಿಕಾರ ರಚನೆ ಸೇರಿದಂತೆ ಹಲವು ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ‘ಬಹುರಾಷ್ಟ್ರೀಯ ಕಂಪೆನಿಗಳು ಡ್ರೈಕ್ಲೀನರ್ ಸಂಸ್ಥೆಗಳನ್ನು ಸ್ಥಾಪಿಸಿ, ಮಡಿವಾಳರ ಕುಲಕಸುಬಿಗೆ ಅಡ್ಡಿ ಉಂಟು ಮಾಡಿವೆ. ಲಾಂಡ್ರಿ ಸ್ಥಾಪನೆ ಮಾಡುವವರಿಗೆ ಸರ್ಕಾರದಿಂದ ಕಡಿಮೆ ಬಡ್ಡಿದರದಲ್ಲಿ ರೂ1 ಲಕ್ಷ ಸಾಲ ಹಾಗೂ ರೂ 25 ಸಾವಿರ ಸಹಾಯಧನ ನೀಡಲಾಗುವುದು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.