ಬೆಂಗಳೂರು: ರಥಸಪ್ತಮಿ ಹಬ್ಬದ ಪ್ರಯುಕ್ತ ನಗರದ ಆಡುಗೋಡಿ ಮುಖ್ಯರಸ್ತೆಯಲ್ಲಿ ಸೋಮವಾರ (ಜ.30) ರಾತ್ರಿ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯುವ ಹಿನ್ನೆಲೆಯಲ್ಲಿ ಸುತ್ತಮುತ್ತಲ ಪ್ರದೇಶದ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.
ಆಡುಗೋಡಿ ಮುಖ್ಯರಸ್ತೆಯಲ್ಲಿ ಸೋಮವಾರ ರಾತ್ರಿ ಎಂಟು ಗಂಟೆಯಿಂದ ಮಂಗಳವಾರ ಬೆಳಿಗ್ಗೆ ಎಂಟು ಗಂಟೆವರೆಗೆ ವಾಹನ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಡಿವಾಳ, ಡಾ.ಕೆ.ಎಚ್.ಮರೀಗೌಡ ರಸ್ತೆಯಿಂದ ಹೊಸೂರು ರಸ್ತೆ ಮಾರ್ಗವಾಗಿ ಆಡುಗೋಡಿ ಕಡೆಗೆ ಹೋಗುವ ವಾಹನಗಳು ಮಡಿವಾಳ ಚೆಕ್ಪೋಸ್ಟ್ ಬಳಿ ಸರ್ಜಾಪುರ ರಸ್ತೆಗೆ ಹೋಗಬೇಕು. ನಂತರ ಕೋರಮಂಗಲ ವಾಟರ್ ಟ್ಯಾಂಕ್ ವೃತ್ತ, ಕೋರಮಂಗಲ ನೂರು ಅಡಿ ರಸ್ತೆ ಮಾರ್ಗವಾಗಿ ಸಾಗಬೇಕು.
ಕೋರಮಂಗಲ 80 ಅಡಿ ರಸ್ತೆಯಿಂದ ಆಡುಗೋಡಿ ಕಡೆಗೆ ಹೋಗುವ ವಾಹನಗಳು ಯುಕೋ ಬ್ಯಾಂಕ್ ವೃತ್ತದಲ್ಲಿ ಬಲ ತಿರುವು ಪಡೆಯುವಂತಿಲ್ಲ. ಅಶೋಕನಗರ, ನೀಲಸಂದ್ರದಿಂದ ಆಡುಗೋಡಿ ಮುಖ್ಯರಸ್ತೆಗೆ ಹೋಗುವ ವಾಹನ ಸವಾರರು ಆನೆಪಾಳ್ಯ ವೃತ್ತದಲ್ಲಿ ಬನ್ನೇರುಘಟ್ಟ ರಸ್ತೆ ಕಡೆಗೆ ಸಾಗಬೇಕು.
ನಂತರ ಬೆಂಗಳೂರು ಡೇರಿ ವೃತ್ತದ ಮಾರ್ಗವಾಗಿ ಮುಂದೆ ಹೋಗಬೇಕು. ವಿಲ್ಸನ್ ಗಾರ್ಡನ್, ಶಾಂತಿನಗರದಿಂದ ಮೈಕೊ ಲಿಂಕ್ ರಸ್ತೆ ಮಾರ್ಗವಾಗಿ ಆಡುಗೋಡಿ ವೃತ್ತದ ಕಡೆಗೆ ಸಂಚರಿಸುವ ವಾಹನ ಸವಾರರು ಮೈಕೊಬಂಡೆ ವೃತ್ತದ ಬಳಿ ಬನ್ನೇರುಘಟ್ಟ ರಸ್ತೆಗೆ ಹೋಗಬೇಕು. ಬಳಿಕ ಡೇರಿ ವೃತ್ತಕ್ಕೆ ಬಂದು ಮುಂದೆ ಚಲಿಸಬೇಕು.
ಪಲ್ಲಕ್ಕಿ ಉತ್ಸವದ ಹಿನ್ನೆಲೆಯಲ್ಲಿ ಆಡುಗೋಡಿ ಸುತ್ತಮುತ್ತ ವಾಹನ ದಟ್ಟಣೆ ಹೆಚ್ಚಿ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬೇಕು ಎಂದು ಮನವಿ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.