ADVERTISEMENT

ಪಾನಮತ್ತರಿಂದ ಕಿರುಕುಳ: ಆರೋಪ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 19:55 IST
Last Updated 5 ಡಿಸೆಂಬರ್ 2012, 19:55 IST

ಬೆಂಗಳೂರು:ಪಾನಮತ್ತರ ಗುಂಪೊಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಲೈಂಗಿಕ ಕಿರುಕುಳ ನೀಡಿದೆ ಎಂದು ಆರೋಪಿಸಿ ಮಣಿಪುರ ಮೂಲದ ಸ್ವರ್ ಎಂಬ ಮಹಿಳೆ ಬಸವನಗುಡಿ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.

ಘಟನೆ ಸಂಬಂಧ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಸ್ವರ್, `ಮಣಿಪುರ ಮೂಲದ ನಾನು, ಹಲವು ವರ್ಷಗಳಿಂದ ನಗರದ ಸರ್ಜಾಪುರದಲ್ಲಿ ನೆಲೆಸಿದ್ದೇನೆ. ಕೆಲಸ ಮುಗಿಸಿಕೊಂಡು ರಾತ್ರಿ 8.30ರ ಸುಮಾರಿಗೆ ಕಾರಿನಲ್ಲಿ ಮನೆಗೆ ಹಿಂದಿ ರುಗುವಾಗ ನೆಟ್ಟಕಲ್ಲಪ್ಪ ವೃತ್ತದ ಸಿಗ್ನಲ್‌ನಲ್ಲಿ ವ್ಯಕ್ತಿಯೊಬ್ಬ ಕಾರಿಗೆ ಹಿಂದಿನಿಂದ ಬೈಕ್ ಗುದ್ದಿಸಿದ. ಘಟನೆಯಿಂದ ವಾಹನದ ಬಂಪರ್  ಜಖಂ ಆಯಿತು.

ವಾಹನವನ್ನು ರಿಪೇರಿ ಮಾಡಿಸಿಕೊಡುವಂತೆ ಹೇಳಿದಾಗ ಆತ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ' ಎಂದರು. `ಇದೇ ವೇಳೆ ಸಮೀಪದ ಬಾರ್‌ನಲ್ಲಿದ್ದ ಸುಮಾರು ಮೂವ ತ್ತು ಮಂದಿ ಪಾನಮತ್ತ ವ್ಯಕ್ತಿಗಳ ಗುಂಪು ಸ್ಥಳಕ್ಕೆ ಬಂತು. ನಾನು ಕನ್ನಡದಲ್ಲಿ ಮಾತನಾಡುತ್ತಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಆ  ವ್ಯಕ್ತಿಗಳು ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸಿದರು. ಕೆಲವರು ನನ್ನನ್ನು ಎಳೆದಾಡಿ, ಅನುಚಿತವಾಗಿ ವರ್ತಿಸಿದರು.

ಈ ನಡುವೆ ಕಾರಿಗೆ ಬೈಕ್ ಗುದ್ದಿಸಿದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದ' ಎಂದು ಆ ಯುವತಿ ದೂರಿದರು. `ಸಿಗ್ನಲ್‌ನಲ್ಲಿದ್ದ ಸಂಚಾರ ವಿಭಾಗದ ಕಾನ್‌ಸ್ಟೇಬಲ್ ಕೂಡ ನನ್ನ ನೆರವಿಗೆ ಬರಲಿಲ್ಲ. ಸ್ಥಳದಿಂದ ವಾಹನವನ್ನು ತೆಗೆಯುವಂತೆ ನನ್ನ ಮೇಲೆಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದರೇ ವಿನಃ, ನನಗೆ ಕಿರುಕುಳ ನೀಡಿದವರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ' ಎಂದು ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.