ADVERTISEMENT

ಪಿಯುಸಿ ರ‌್ಯಾಂಕ್ ವಿಜೇತರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 23 ಮೇ 2012, 19:30 IST
Last Updated 23 ಮೇ 2012, 19:30 IST
ಪಿಯುಸಿ ರ‌್ಯಾಂಕ್ ವಿಜೇತರ ಸಂಭ್ರಮ
ಪಿಯುಸಿ ರ‌್ಯಾಂಕ್ ವಿಜೇತರ ಸಂಭ್ರಮ   

ಬೆಂಗಳೂರು:  `ನಾಲ್ಕು ವಿಷಯಗಳಲ್ಲಿ ನೂರು ಅಂಕ ಗಳಿಸಿದ್ದೇನೆ. ಇಷ್ಟು ಅಂಕ ನಿರೀಕ್ಷೆ ಮಾಡಿರಲಿಲ್ಲ. ಫಲಿತಾಂಶ ತುಂಬಾ ಸಂತೋಷ ತಂದಿದೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ~ ಎಂದು ನಗರದ ಕ್ರೈಸ್ಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಶಿವಕುಮಾರ್ ಎಸ್.ಕೆ. ಸಂತಸ ವ್ಯಕ್ತಪಡಿಸಿದರು.

ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ನಾಲ್ಕನೇ ರ‌್ಯಾಂಕ್ ಗಳಿಸಿರುವ ಅವರು, `ಶಾಲೆಯಲ್ಲಿ ಪ್ರತಿ ತಿಂಗಳು ಪರೀಕ್ಷೆ ನಡೆಸುತ್ತಿದ್ದರು. ಇದರಿಂದಾಗಿ ಆ ತಿಂಗಳ ಪಠ್ಯವನ್ನು ಅದೇ ತಿಂಗಳಿನಲ್ಲಿ ಕಲಿತುಕೊಳ್ಳಲು ಸಹಕಾರಿಯಾಯಿತು. ಟ್ಯೂಷನ್‌ಗೆ ಹೋಗಿಲ್ಲ. ಲೆಕ್ಕಪರಿಶೋಧಕ ಆಗಬೇಕು ಎಂಬ ಗುರಿ ಇದೆ~ ಎಂದರು.
ಗೊಟ್ಟಿಗೆರೆ ನಿವಾಸಿಯಾದ ಅವರು ಕೋದಂಡರಾಮ ಶೆಟ್ಟಿ ಹಾಗೂ ನಾಗಲಕ್ಷ್ಮೀ ದಂಪತಿಯ ಪುತ್ರ.

ಖುಷಿ ನೀಡಿದೆ: `ಗುರು ಹಿರಿಯರ, ಗೆಳೆಯರ ಬೆಂಬಲದಿಂದ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು.
ರ‌್ಯಾಂಕ್ ಗಳಿಸಬೇಕು ಎಂದು ಓದಿಲ್ಲ. ರ‌್ಯಾಂಕ್ ಬಂದಿರುವುದು ಖುಷಿ ತಂದಿದೆ~ ಎಂದು ಎಂದು ಕ್ರೈಸ್ತ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಶ್ವಿನಿ ಎಚ್. ಪಂಡಿತ್ ತಿಳಿಸಿದರು. ವಾಣಿಜ್ಯ ವಿಭಾಗದಲ್ಲಿ 8ನೇ ರ‌್ಯಾಂಕ್ ಹಂಚಿಕೊಂಡಿರುವ ಅವರು ಲೆಕ್ಕಪರಿಶೋಧಕಿ ಆಗಬೇಕು ಎಂಬ ಗುರಿ ಹೊಂದಿದ್ದಾರೆ. ಅವರು ಕಬ್ಬನ್‌ಪೇಟೆ ನಿವಾಸಿ ಹರೀಶ್ ಪಂಡಿತ್ ಹಾಗೂ ವಿದ್ಯಾ ಹರೀಶ್ ದಂಪತಿ ಪುತ್ರಿ.

ನಿರೀಕ್ಷಿಸಿದ್ದೆ: `ಉತ್ತಮ ಅಂಕದ ನಿರೀಕ್ಷೆಯಲ್ಲಿದ್ದೆ. ಈಗ ಕನಸು ಸಾಕಾರಗೊಂಡಿದೆ. ಪರೀಕ್ಷೆಗೋಸ್ಕರ ಎಂದೂ ಓದಿದವಳಲ್ಲ. ಅಂದಿನ ಪಠ್ಯವನ್ನು ಅಂದೇ ಓದಿಕೊಳ್ಳುತ್ತಿದ್ದೆ. ಎಂಜಿನಿಯರಿಂಗ್‌ಗೆ ಸೇರುತ್ತೇನೆ~ ಎಂದು ವಿಜ್ಞಾನ ವಿಭಾಗದಲ್ಲಿ ಒಂಬತ್ತನೇ ರ‌್ಯಾಂಕ್ ಹಂಚಿಕೊಂಡ ನಂದಿತಾ ಎನ್. ತಿಳಿಸಿದರು. 

ಅವರು ಶಂಕರಪುರದ ಜ್ಞಾನೋದಯ ಪಿ.ಯು. ಕಾಲೇಜಿನ ವಿದ್ಯಾರ್ಥಿನಿ. ಚಾಮರಾಜಪೇಟೆ ನಿವಾಸಿ ನಾರಾಯಣ ಪ್ರಕಾಶ್ ಹಾಗೂ ಸುಧಾ ದಂಪತಿ ಪುತ್ರಿ.  

ಉತ್ತಮ ಫಲಿತಾಂಶ: ನಗರದ ಸಮರ್ಥನಂ ಅಂಧರ ಶಾಲೆಯ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದಾರೆ.  ಅಂಧ ವಿದ್ಯಾರ್ಥಿಗಳಾದ ಯೋಗರಾಜ್ ಆರ್ (442 ಅಂಕ), ಅಶೋಕ್ ಆರ್ (410 ಅಂಕ) ಹಾಗೂ ಭಾಗ್ಯಶ್ರೀ (366) ಪ್ರಥಮದರ್ಜೆಯಲ್ಲಿ, ವರಲಕ್ಷ್ಮೀ (352) ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.