ADVERTISEMENT

ಪುರವಂಕರದಿಂದ `ಪ್ರಾವಿಡೆಂಟ್ ಸನ್‌ವರ್ಥ್'

ರೂ.1200ಕೋಟಿ ವೆಚ್ಚ-5952 ಮನೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 12 ಜನವರಿ 2013, 20:08 IST
Last Updated 12 ಜನವರಿ 2013, 20:08 IST
ಪುರವಂಕರ ಪ್ರಾಜೆಕ್ಟ್ಸ್ ಲಿ.ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಆಶಿಶ್ ಪುರವಂಕರ, ಬೆಂಗಳೂರಿನ ಹೊರವಲಯದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ `ಪ್ರಾವಿಡೆಂಟ್ ಸನ್‌ವರ್ಥ್' ಬೃಹತ್ ವಸತಿ ಸಮುಚ್ಛಯ ನಿರ್ಮಾಣ ಯೋಜನೆಗೆ ದೀಪ ಬೆಳಗಿ ಚಾಲನೆ ನೀಡಿದರು. `ಪಿಎಚ್‌ಎಲ್'ನ ವ್ಯವಸ್ಥಾಪಕ ನಿರ್ದೇಶಕ ವಿ.ಮಧು ಮತ್ತಿತರಿದ್ದರು
ಪುರವಂಕರ ಪ್ರಾಜೆಕ್ಟ್ಸ್ ಲಿ.ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಆಶಿಶ್ ಪುರವಂಕರ, ಬೆಂಗಳೂರಿನ ಹೊರವಲಯದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ `ಪ್ರಾವಿಡೆಂಟ್ ಸನ್‌ವರ್ಥ್' ಬೃಹತ್ ವಸತಿ ಸಮುಚ್ಛಯ ನಿರ್ಮಾಣ ಯೋಜನೆಗೆ ದೀಪ ಬೆಳಗಿ ಚಾಲನೆ ನೀಡಿದರು. `ಪಿಎಚ್‌ಎಲ್'ನ ವ್ಯವಸ್ಥಾಪಕ ನಿರ್ದೇಶಕ ವಿ.ಮಧು ಮತ್ತಿತರಿದ್ದರು   

ಬೆಂಗಳೂರು: `ಪುರವಂಕರ ಪ್ರಾಜೆಕ್ಟ್ಸ್ ಲಿ.'ನ ಅಂಗಸಂಸ್ಥೆಯಾದ `ಪ್ರಾವಿಡೆಂಟ್ ಹೌಸಿಂಗ್ ಲಿ.'(ಪಿಎಚ್‌ಎಲ್) ನಗರದ ಹೊರವಲಯದಲ್ಲಿ ರೂ.1200 ಕೋಟಿ ವೆಚ್ಚದಲ್ಲಿ ವಸತಿ ಸಮುಚ್ಛಯಗಳ ನಿರ್ಮಾಣದ ಬೃಹತ್ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಮೈಸೂರು ಮಾರ್ಗ ನೈಸ್ ವರ್ತುಲ ರಸ್ತೆ ಪಕ್ಕ 60 ಎಕರೆ ವಿಸ್ತೀರ್ಣದಲ್ಲಿ 5952 ಮನೆಗಳ `ಪ್ರಾವಿಡೆಂಟ್ ಸನ್‌ವರ್ಥ್' ನೆಲೆಗೊಳ್ಳಲಿದೆ.

`ಇಲ್ಲಿ ನಿರ್ಮಾಣಗೊಳ್ಳಲಿರುವ ವಸತಿ ಪ್ರದೇಶ ಒಟ್ಟು 60 ಲಕ್ಷ ಚದರಡಿ ಇರಲಿದೆ. ಮಧ್ಯಮ ವರ್ಗದ ಗ್ರಾಹಕರಿಗೂ ಕೈಗೆಟಕುವ ಬೆಲೆಯಲ್ಲಿ ಮೇಲ್ದರ್ಜೆ ಮನೆಗಳನ್ನು ಒದಗಿಸಬೇಕೆಂಬುದೇ ಈ ಯೋಜನೆ ಉದ್ದೇಶ. 2 ಕೊಠಡಿಗಳ ಫ್ಲ್ಯಾಟ್ ರೂ.29.75 ಲಕ್ಷ ಮತ್ತು 3 ಕೊಠಡಿಗಳ ಮನೆ ರೂ.35.96 ಲಕ್ಷದಲ್ಲಿ ಲಭ್ಯವಿವೆ' ಎಂದು `ಪಿಎಚ್‌ಎಲ್' ವ್ಯವಸ್ಥಾಪಕ ನಿರ್ದೇಶಕ ವಿ.ಮಧು ಹೇಳಿದರು. `ಪ್ರಾವಿಡೆಂಟ್ ಸನ್‌ವರ್ಥ್' ಯೋಜನೆಗೆ ಶನಿವಾರ ಚಾಲನೆ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿ, `ಸನ್‌ವರ್ಥ್' ಯೋಜನೆ ಐದು ಹಂತಗಳಲ್ಲಿ, ಐದು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಮೊದಲ  ಹಂತದಲ್ಲಿ 1440 ಮನೆಗಳು 36 ತಿಂಗಳಲ್ಲಿ ನಿರ್ಮಾಣಗೊಳ್ಳಲಿವೆ.

ಈಗಾಗಲೇ 300ಕ್ಕೂ ಅಧಿಕ ಮನೆಗಳನ್ನು ಗ್ರಾಹಕರು ರೂ.1 ಲಕ್ಷ ಮುಂಗಡ ನೀಡಿ ಕಾಯ್ದಿರಿಸಿದ್ದಾರೆ. ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ) ಗೃಹಸಾಲ ನೀಡಲಿದೆ. ಐಸಿಐಸಿಐ ಬ್ಯಾಂಕ್ ಶೇ 90ರಷ್ಟು ಗೃಹಸಾಲ ಒದಗಿಸಲು ಮುಂದೆ ಬಂದಿದೆ ಎಂದು ವಿವರಿಸಿದರು. `ಪಿಎಚ್‌ಎಲ್'ನ ಮುಂದಿನ ಯೋಜನೆಗಳು ಮೈಸೂರು, ಮಂಗಳೂರು, ಕೊಯಮತ್ತೂರು, ಹೈದರಾಬಾದ್‌ನಲ್ಲಿ ಆರಂಭಗೊಳ್ಳಲಿವೆ ಬೆಂಗಳೂರಿನಲ್ಲಿ `ಕ್ರೆಡೈ'ನ 190 ಸದಸ್ಯರೂ ಸೇರಿದಂತೆ 500 ಮಂದಿ ಗೃಹ ನಿರ್ಮಾಣಗಾರರಿದ್ದಾರೆ. ತಿಂಗಳಿಗೆ 35 ಲಕ್ಷ ಚದರಡಿ ವಸತಿ ಪ್ರದೇಶ ಮಾರಾಟವಾಗುತ್ತಿವೆ ಎಂದರು.

ಕಾರ್ಮಿಕ ಕೊರತೆ: ರಾಜ್ಯದ ನಿರ್ಮಾಣ ಕ್ಷೇತ್ರವನ್ನು ಕಾಡುತ್ತಿರುವುದು ನುರಿತ ಕೆಲಸಗಾರರ ಸಮಸ್ಯೆ. ಕಟ್ಟಡ ನಿರ್ಮಾಣದಲ್ಲಿ ಶ್ರಮಿಸಲು ಸ್ಥಳೀಯರು ಹೆಚ್ಚು ಬರುವುದಿಲ್ಲ. ಉತ್ತರ ಕರ್ನಾಟಕದ ಮಂದಿ ಲಭ್ಯತೆ ಒಟ್ಟು ಬೇಡಿಕೆಯ ಶೇ 10ರಷ್ಟಿದೆ. ಬಿಹಾರ, ಒಡಿಶಾದ ಮಾನವ ಸಂಪನ್ಮೂಲವನ್ನೇ ಅವಲಂಬಿಸುವುದು ಅನಿವಾರ್ಯವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.