ADVERTISEMENT

ಪೆಟ್ರೋಲ್ ವಿತರಕರ ಮುಷ್ಕರ: ತೊಂದರೆಯಿಲ್ಲ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 18:30 IST
Last Updated 1 ಅಕ್ಟೋಬರ್ 2012, 18:30 IST

ಬೆಂಗಳೂರು: ಪೆಟ್ರೋಲ್ ವಿತರಕರ ಮುಷ್ಕರದಿಂದಾಗಿ ಸೋಮವಾರ ನಗರದ ನಾಗರಿಕರಿಗೆ ಹೆಚ್ಚಿನ ತೊಂದರೆಯಾಗಿಲ್ಲ. ಬಂದ್ ಬಗ್ಗೆ ಭಾನುವಾರ ರಾತ್ರಿಯೇ ವಿಷಯ ತಿಳಿದ ವಾಹನ ಸವಾರರು ಪೆಟ್ರೋಲ್ ಹಾಗೂ ಡೀಸೆಲ್ ದಾಸ್ತಾನು ಮಾಡಿಕೊಂಡಿರುವುದರಿಂದ ಹೆಚ್ಚಿನ ಅನನುಕೂಲವಾಗಿಲ್ಲ.

ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಯನ್ನು ಸ್ಥಗಿತಗೊಳಿಸಲಾಗಿದೆಯೇ ಹೊರತು ಮಾರಾಟವನ್ನು ನಿಲ್ಲಿಸಿಲ್ಲ. ಹೀಗಾಗಿ ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟ ನಗರದ ಬಂಕ್‌ಗಳಲ್ಲಿ ಸೋಮವಾರ ಎಂದಿನಂತಿತ್ತು.

`ರಾಜ್ಯದ ಬಂಕ್‌ಗಳಲ್ಲಿ ಎರಡು ಮೂರು ದಿನಗಳಿಗೆ ಸಾಕಾಗುವಷ್ಟು ಪೆಟ್ರೋಲ್ ಹಾಗೂ ಡೀಸೆಲ್ ದಾಸ್ತಾನು ಇರುವುದರಿಂದ ಮಂಗಳವಾರವೂ ಯಾವುದೇ ತೊಂದರೆಯಾಗುವುದಿಲ್ಲ. ಬುಧವಾರ ಬಂದ್ ಹಿಂಪಡೆಯಲಾಗುವುದು~ ಎಂದು ರಾಜ್ಯ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಅಧ್ಯಕ್ಷ ಬಿ.ಆರ್.ರವೀಂದ್ರನಾಥ್ `ಪ್ರಜಾವಾಣಿ~ಗೆ ತಿಳಿಸಿದರು.
 
`ಎರಡು ದಿನಗಳ ಕಾಲ ತೈಲ ಕಂಪೆನಿಗಳಿಂದ ಇಂಧನ ಖರೀದಿಯನ್ನು ಸ್ಥಗಿತಗೊಳಿಸಿ ಬಂದ್ ನಡೆಸಲಾಗುತ್ತಿದೆ. ಬಂಕ್‌ಗಳಲ್ಲಿ ದಾಸ್ತಾನು ಇರುವವರೆಗೂ ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟ ನಡೆಯಲಿದೆ.

ಎಲ್ಲ ಬಂಕ್‌ಗಳಲ್ಲಿಯೂ 2-3 ದಿನಗಳಿಗೆ ಸಾಕಾಗುವಷ್ಟು ಪ್ರಮಾಣದಲ್ಲಿ ತೈಲ ದಾಸ್ತಾನು ಇರುವುದರಿಂದ ಸಾರ್ವಜನಿಕರಿಗೆ ಬಂದ್‌ನಿಂದ ತೊಂದರೆಯಾಗುವುದಿಲ್ಲ~ ಎಂದರು. `ದಾಸ್ತಾನು ಕಡಿಮೆಯಾದರೂ ಮಂಗಳವಾರ ಸರ್ಕಾರಿ ರಜೆ ಇರುವುದರಿಂದ ಹೆಚ್ಚು ತೊಂದರೆಯಾಗುವುದಿಲ್ಲ. ವಾಹನ ಸವಾರರಿಗೆ ತೊಂದರೆ ನೀಡುವ ಉದ್ದೇಶವೂ ನಮಗಿಲ್ಲ~ ಎಂದರು.

`ಇಂಧನವು ಗಾಳಿಯಲ್ಲಿ ಆವಿಯಾಗುವುದರಿಂದ ಬಂಕ್ ಮಾಲೀಕರಿಗೆ ಶೇ 0.75ರಷ್ಟು ನಷ್ಟ ಉಂಟಾಗುತ್ತದೆ. ಅಪೂರ್ವ ಚಂದ್ರ ಅವರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಈ ಅಂಶವನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.

 ಆದರೆ, ಸದ್ಯ ಕೇವಲ ಶೇ 0.1ರಷ್ಟು ನಷ್ಟದ ಪರಿಹಾರವನ್ನು ಮಾತ್ರ ತೈಲ ಕಂಪೆನಿಗಳು ಭರಿಸುತ್ತಿವೆ ಎಂದು ಅವರು ತಿಳಿಸಿದರು.ಈ ನಷ್ಟವನ್ನು ತುಂಬಿಕೊಡುವಂತೆ ಹಾಗೂ ಅಪೂರ್ವ ಚಂದ್ರ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಎರಡು ದಿನಗಳ ಕಾಲ ತೈಲ ಖರೀದಿಯನ್ನು ನಿಲ್ಲಿಸಿ ಬಂದ್ ನಡೆಸಲಾಗುತ್ತಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.