ಬೆಂಗಳೂರು: ‘ಸ್ಮಾರ್ಟ್ ಪೊಲೀಸಿಂಗ್–2018’ ವ್ಯವಸ್ಥೆಯಡಿ ಕರ್ನಾಟಕ ಪೊಲೀಸ್ ಇಲಾಖೆ ಕೈಗೊಂಡ ‘ಪರಿಣಾಮಕಾರಿ ಹೆದ್ದಾರಿ ಗಸ್ತು ವ್ಯವಸ್ಥೆ’ಗೆ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟವು (ಎಫ್ಐಸಿಸಿಐ) ಮೊದಲ ಬಹುಮಾನ ನೀಡಿದೆ.
ಇಲಾಖೆಯಲ್ಲಿ ಪಾರದರ್ಶಕ ನೇಮಕಾತಿ ಪ್ರಕ್ರಿಯೆ ಅಳವಡಿಸಿಕೊಂಡಿರುವುದನ್ನು ಗುರುತಿಸಿ ಸಂಸ್ಥೆ ‘ವಿಶೇಷ ಜ್ಯೂರಿ’ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳು ಭಾಗವಹಿಸಿದ್ದವು.
ನವದೆಹಲಿಯಲ್ಲಿ ಗುರುವಾರ ನಡೆದ ಎಫ್ಐಸಿಸಿಐ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ ಸಲೀಂ ಅವರಿಗೆ(ಅಪರಾಧ ಮತ್ತು ತಾಂತ್ರಿಕ ಸೇವೆ ಹಾಗೂ ಸಂಚಾರ ಮತ್ತು ರಸ್ತೆ ಸುರಕ್ಷತೆ ಆಯುಕ್ತರು) ಮೊದಲ ಬಹುಮಾನ ಹಾಗೂ ವಿಶೇಷ ಜ್ಯೂರಿ ಪ್ರಶಸ್ತಿಯನ್ನು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರಾಘವೇಂದ್ರ ಔರಾದಕರ್ ಅವರಿಗೆ ಕೇಂದ್ರ ಸಚಿವ ವಿಜಯ್ ಗೋಯಲ್ ಪ್ರದಾನ ಮಾಡಿದರು.
14 ರಾಷ್ಟ್ರೀಯ ಮತ್ತು 114 ರಾಜ್ಯ ಸೇರಿದಂತೆ ರಾಜ್ಯದಲ್ಲಿ ಒಟ್ಟು 28,311 ಕಿಲೊ ಮೀಟರ್ ಹೆದ್ದಾರಿ ಇದೆ. ಈ ಹೆದ್ದಾರಿಯುದ್ದಕ್ಕೂ ಉತ್ತಮ ಗಸ್ತು ಯೋಜನೆಯನ್ನು ಕರ್ನಾಟಕ ಪೊಲೀಸ್ ಇಲಾಖೆ ಕೈಗೊಂಡಿದೆ. ತುರ್ತು ಸಂದರ್ಭದಲ್ಲಿ ಸ್ಪಂದಿಸಲು ನುರಿತ ಪೊಲೀಸ್ ತಂಡವನ್ನೂ ಹೆದ್ದಾರಿಗಳಲ್ಲಿ ನಿಯೋಜಿಸಿದೆ ಎಂದು ಎಫ್ಐಸಿಸಿಐ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.