ಬೆಂಗಳೂರು: ಪೊಲೀಸ್ ಇಲಾಖೆಯ ವಾಹನವೊಂದು ಆಟೊಗೆ ಡಿಕ್ಕಿ ಹೊಡೆದ ಪರಿಣಾಮ ಆಟೊ ಚಾಲಕ ಗಾಯಗೊಂಡ ಘಟನೆ ರಾಜಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಸಂಭವಿಸಿದೆ.
ಘಟನೆಯಲ್ಲಿ ಗಾಯಾಗೊಂಡ ಆಟೊ ಚಾಲಕ ಸೈಯದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಗ್ಗೆರೆ ಮುಖ್ಯರಸ್ತೆಯಲ್ಲಿರುವ ಕೃಷ್ಣಾನಂದನಗರದಲ್ಲಿ ವೇಗವಾಗಿ ಬಂದ ಪೊಲೀಸ್ ವಾಹನ ಆಟೊಗೆ ಡಿಕ್ಕಿ ಹೊಡೆದಿದೆ. ಪಶ್ಚಿಮ ವಿಭಾಗದ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಗ ಪಾನಮತ್ತನಾಗಿ ವಾಹನ ಚಾಲನೆ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ ಆದರೆ ಹಿರಿಯ ಅಧಿಕಾರಿಗಳು ಅದನ್ನು ದೃಢಪಡಿಸುತ್ತಿಲ್ಲ.
`ಘಟನೆ ಬಗ್ಗೆ ತನಿಖೆ ನಡೆಸಿ ಶುಕ್ರವಾರ ಸಂಜೆಯೊಳಗೆ ವರದಿ ಸಲ್ಲಿಸುವಂತೆ ಎಸಿಪಿ ಅನಿಲ್ ಅವರಿಗೆ ತಿಳಿಸಿದ್ದೇನೆ. ವಾಹನ ಚಾಲನೆ ಮಾಡುತ್ತಿದ್ದವರು ಯಾರು, ಅವರು ಮದ್ಯಪಾನ ಮಾಡಿದ್ದರೇ ಎಂಬ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇನೆ~ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಎಂ.ಎ.ಸಲೀಂ ತಿಳಿಸಿದರು.
ಅದು ಪೊಲೀಸ್ ಇಲಾಖೆಯ ವಾಹನ ಎಂಬುದನ್ನು ಸಲೀಂ ಖಚಿತಪಡಿಸಿದರು. ಗಂಗರಾಜು ಅದರ ಚಾಲಕ. ಸಂಜೆ ವಾಹನದಲ್ಲಿ ಅವರ ಮಗ ಕೂಡ ಇದ್ದರು ಎಂದು ಮಾಹಿತಿ ಬಂದಿದೆ. ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.