ADVERTISEMENT

ಪ್ರತಿಭಾ ಪಲಾಯನ ತಪ್ಪಿಸಲು ಕೈಗಾರಿಕೆ ಸಹಕಾರಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 18:55 IST
Last Updated 7 ಮಾರ್ಚ್ 2011, 18:55 IST

ನೆಲಮಂಗಲ: ಬೆಂಗಳೂರು ಸನಿಹದಲ್ಲಿ ಹೆಚ್ಚು ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾಗುವುದರಿಂದ ಉದ್ಯೋಗ ಸೃಷ್ಟಿಯಾಗಿ ಆರ್ಥಿಕ ಅಭಿವೃದ್ಧಿಯೊಂದಿಗೆ ಪ್ರತಿಭಾ ಪಲಾಯನವನ್ನು ತಪ್ಪಿಸಿದಂತಾಗುತ್ತದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ್ ತಿಳಿಸಿದರು.ಸ್ಥಳೀಯ ಗೋಲ್ಡನ್ ಪಾಮ್ ರೆಸಾರ್ಟ್‌ನಲ್ಲಿ ಗ್ರೇಟರ್ ನೆಲಮಂಗಲ ಇಂಡಸ್ಟ್ರೀಸ್ ಅಸೋಸಿಯೇಷನ್ ಉದ್ಘಾಟನಾ ಸಮಾರಂಭದಲ್ಲಿ ‘ಫೋಕಸ್’ ಸ್ಮರಣ ಸಂಚಿಕೆಯನ್ನು ಲೋಕಾರ್ಪಣೆ ಮಾಡಿ ಸುವ್ಯವಸ್ಥಿತ ರಸ್ತೆಗಳ ನಿರ್ಮಾಣದಿಂದ ಬೆಂಗಳೂರು ರಾಷ್ಟ್ರದ ಪ್ರಮುಖ ಕೇಂದ್ರವಾಗಲಿದೆ ಎಂದರು.

ಜಗತ್ತಿನ ಉದ್ದಿಮೆದಾರರ ಗಮನ ಸೆಳೆದ ರಾಜ್ಯವು, ಉದ್ಯಮಗಳ ಸ್ಥಾಪನೆಗೆ ಪೂರ್ಣ ಸಹಕಾರ ನೀಡಲಿದೆ, ಇದಕ್ಕಾಗಿ 3ಸಾವಿರ ಎಕರೆ ಜಮೀನು ವಶಪಡಿಸಿಕೊಂಡಿದ್ದು ಅಗತ್ಯಬಿದ್ದರೆ ಇನ್ನೂ 2ಸಾವಿರ ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಬೆಂಗಳೂರು ದುಬೈ ಆಗಲಿದೆ ಎಂದು ಭವಿಷ್ಯ ನುಡಿದರು. ಕೈಗಾರಿಕೆ ಪ್ರಾರಂಭಿಸಲು ಜಮೀನು ಪಡೆದವರು ವಿಳಂಬ ನೀತಿ ಅನುಸರಿಸಿದಲ್ಲಿ ಮಂಜೂರಾತಿ ಆದೇಶ ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದ ಬಳಿಗಾರ್ ಅವರು ಗ್ರೇಟರ್ ನೆಲಮಂಗಲ ಇಂಡಸ್ಟ್ರೀಸ್ ಅಸೋಸಿಯೇಷನ್ ವಿಭಿನ್ನವಾಗಿ ಬೆಳೆಯಲಿ ಎಂದು ಶುಭ ಕೋರಿದರು.

ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದು ಸಂಘದ ಧ್ಯೇಯೋದ್ದೇಶಗಳನ್ನು ವಿವರಿಸಿ ಸದಸ್ಯತ್ವ ಪಡೆಯಲು ಕೋರಿದರು. ಉಪಾಧ್ಯಕ್ಷ ಕೆ.ಜಿ.ಉಮೇಶ್ ಈ ಭಾಗದ ಉದ್ದಿಮೆಗಳ ಮಾಹಿತಿಯ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು. ಕಾರ್ಯದರ್ಶಿ ಎಸ್.ವಿ.ಪಾಟೀಲ್ ಸ್ವಾಗತಿಸಿ, ಎನ್.ಎಸ್.ಗೋವಿಂದರಾಜು ವಂದಿಸಿದರು. ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಡಾ.ಎಂ.ಜಯಪ್ರಸಾದ್, ಹರ್ಷ ಆಸ್ಪತ್ರೆಯ ನಿರ್ದೇಶಕ ಎಸ್.ಶಿವಕುಮಾರ್, ಪಿ.ಆರ್.ಬಸವರಾಜು, ಈ ಭಾಗದ ಎಲ್ಲ ಕಾರ್ಖಾನೆಗಳ ಅಧಿಕಾರಿಗಳು ಭಾಗವಹಿಸಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.