ಬೆಂಗಳೂರು: ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಸ್ಥಳಾಂತರ ಮಾಡದೆಯೇ ವಿಧಾನಸೌಧದ ಮುಂದೆ ನಮ್ಮ ಮೆಟ್ರೊದ ನೆಲದಡಿಯ ನಿಲ್ದಾಣ ಕಾಮಗಾರಿ ನಡೆಸಬಹುದು ಎಂದು ಸ್ಥಳ ಪರಿಶೀಲನೆ ಮತ್ತು ಅಧ್ಯಯನ ನಡೆಸಿದ ಮದ್ರಾಸ್ ಐಐಟಿಯ ತಜ್ಞರ ಸಮಿತಿಯು ಶಿಫಾರಸು ಮಾಡಿದೆ. ಆದರೆ ಈ ವಿಚಾರದಲ್ಲಿ ಜವಾಬ್ದಾರಿ ವಹಿಸಿಕೊಳ್ಳಲು ಬೆಂಗಳೂರು ಮೆಟ್ರೊ ನಿಗಮ (ಬಿಎಂಆರ್ಸಿಎಲ್) ಹಿಂದೇಟು ಹಾಕಿದೆ.
ಪ್ರತಿಮೆ ಇರುವ ಕಡೆ ನಿರ್ಮಿಸಬೇಕಿರುವ ಪ್ರವೇಶದ್ವಾರವನ್ನು ಬೇರೆ ಕಡೆ ನಿರ್ಮಿಸುವುದು ಸೇರಿದಂತೆ ಏಳು ತಂತ್ರೋಪಾಯಗಳನ್ನು ಅನುಸರಿಸುವುದರಿಂದ ಪ್ರತಿಮೆ ಸ್ಥಳಾಂತರವನ್ನು ತಪ್ಪಿಸಬಹುದು ಎಂಬುದು ತಜ್ಞರ ಸಮಿತಿಯ ಸಲಹೆ.
`ಸ್ಫೋಟ ಮಾಡದೆಯೇ ನೆಲ ಅಗೆತದ ವೇಳೆಗೆ ಮೆಟ್ರೊ ಸಂಸ್ಥೆ ವೈರ್ ಕಟ್ಟಿಂಗ್ ವಿಧಾನ ಅಳವಡಿಸಿಕೊಳ್ಳಬಹುದು. ಸ್ಥಳ ಭೇಟಿಯ ವೇಳೆಗೆ ಸಂಬಂಧಿಸಿದ ಎಲ್ಲರೊಂದಿಗೆ ಚರ್ಚೆ ನಡೆಸಲಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಅಗೆತ ನಡೆಸಬಹುದು~ ಎಂದು ಸಮಿತಿಯು ಅಭಿಪ್ರಾಯ ಪಟ್ಟಿದೆ.
`ನಿಗಮವು ಪ್ರವೇಶ ದ್ವಾರ ಸ್ಥಳಾಂತರಿಸಲು ಒಪ್ಪದಿದ್ದರೆ ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಕ್ಕೆ ಪ್ರತಿಮೆ ಸ್ಥಳಾಂತರಿಸಿ ಕಾಮಗಾರಿ ಪೂರ್ಣಗೊಂಡ ಬಳಿಕ ಹಿಂದಿನ ಸ್ಥಳದಲ್ಲೇ ಪ್ರತಿಮೆ ಪ್ರತಿಷ್ಠಾಪಿಸಬಹುದು. ಪ್ರತಿಮೆಯ ತಳಪಾಯಕ್ಕೆ ಹಾನಿಯಾಗದಂತೆ ಪ್ರವೇಶದ್ವಾರದ ಆರ್ಸಿಸಿ ಟನೆಲ್ ನಿರ್ಮಿಸಬೇಕು~ ಎಂದು ಸಮಿತಿಯು ಸೂಚಿಸಿದೆ.
ಎಚ್ಚರಿಕೆ ನಡೆ: ಆದರೆ, ಸಮೀಕ್ಷಾ ವರದಿಯ ಶಿಫಾರಸುಗಳ ಬಗ್ಗೆ ನಿಗಮ ಎಚ್ಚರಿಕೆಯ ನಡೆ ಇಟ್ಟಿದೆ. ಆಳವಾದ ಅಗೆತ ನಡೆಸುವ ವೇಳೆಗೆ ಪ್ರತಿಮೆಯ ಸ್ಥಿರತೆಗೆ ಧಕ್ಕೆ ಉಂಟಾಗಬಹುದು ಎಂದು ನಿಗಮ ಆತಂಕ ವ್ಯಕ್ತಪಡಿಸಿದೆ. ಈ ವರೆಗೆ ಪ್ರತಿಮೆ ಬಳಿ ನಿಯಂತ್ರಿತ ಸ್ಫೋಟಗಳ ಮೂಲಕ ಅಗೆತ ನಡೆಸಿದ ಹಿನ್ನೆಲೆಯಲ್ಲಿ ಪ್ರತಿಮೆ ಅಕ್ಕಪಕ್ಕದಲ್ಲಿ ಕಂಪನಕ್ಕೆ ಕಾರಣವಾಗಿತ್ತು. ಭವಿಷ್ಯದಲ್ಲೂ ಇದೇ ಮಾದರಿಯಲ್ಲಿ ನಿಯಂತ್ರಿತ ಸ್ಫೋಟಗಳನ್ನು ನಡೆಸಿದರೆ ಪ್ರತಿಮೆಯ ತಳಪಾಯಕ್ಕೆ ಹಾನಿಯುಂಟಾಗಬಹುದು ಎಂದು ನಿಗಮ ಹೇಳಿದೆ.
ಪ್ರತಿಮೆ ಸ್ಥಳಾಂತರಿಸದೆಯೇ ಕಾಮಗಾರಿ ನಡೆಸುವಾಗ ಒಂದು ಪಕ್ಷ ಹಾನಿಯಾದರೆ ಸಮಾಜ ಕಲ್ಯಾಣ ಇಲಾಖೆಯೇ ಹೊಣೆ ಹೊರಲಿದೆ ಎಂದು ಸಚಿವ ಎ. ನಾರಾಯಣಸ್ವಾಮಿ ಲಿಖಿತವಾಗಿ ತಿಳಿಸಬೇಕು. ಆಗ ಪ್ರತಿಮೆ ಸ್ಥಳಾಂತರಿಸದೇ ಕಾಮಗಾರಿ ಮುಂದುವರೆಸಬಹುದು ಎಂಬ ಚಿಂತನೆಯನ್ನು ನಿಗಮ ಮುಂದಿಟ್ಟಿದೆ.
ಪರಿಹಾರ ಸೂತ್ರ: `ಪ್ರತಿಮೆ ಸ್ಥಳಾಂತರ ವಿವಾದಕ್ಕೆ ಸಂಬಂಧಿಸಿ ಇದೇ 14ರ ಬಳಿಕ ದಲಿತ ಸಂಘಟನೆಗಳ ಮುಖಂಡರ ಜತೆಗೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಿ ವಿವಾದ ಪರಿಹರಿಸಲು ಪ್ರಯತ್ನಿಸಲಾಗುವುದು~ ಎಂದು ಸಚಿವ ಎ. ನಾರಾಯಣ ಸ್ವಾಮಿ ಅವರು ಹೇಳಿದ್ದಾರೆ.
`ಪ್ರತಿಮೆ ಸ್ಥಳಾಂತರ ಮಾಡದೆಯೇ ಕಾಮಗಾರಿ ನಡೆಸಬಹುದು ಎಂದು ಐಐಟಿ ಸಮೀಕ್ಷಾ ವರದಿ ತಿಳಿಸಿದೆ. ವರದಿಯ ಆಧಾರದಲ್ಲಿ ಕಾಮಗಾರಿ ನಡೆಸುವ ವೇಳೆಗೆ ಎಣಿಕೆ ತಪ್ಪಿ ಪ್ರತಿಮೆಗೆ ಹಾನಿಯಾದರೆ ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆಯುಂಟಾಗುತ್ತದೆ. ಈ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಏಕಾಏಕಿ ತೀರ್ಮಾನ ಕೈಗೊಳ್ಳುವಂತಿಲ್ಲ~ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
`ಪ್ರತಿಮೆ ಸ್ಥಳಾಂತರದಿಂದ ಹಾನಿಯಾಗುವುದಿಲ್ಲ ಎಂಬ ಬಗ್ಗೆ ರಾಜ್ಯ ಸರ್ಕಾರ ಖಚಿತಪಡಿಸಿದರೆ ಸ್ಥಳಾಂತರಕ್ಕೆ ನಮ್ಮ ವಿರೋಧ ಇಲ್ಲ. ಪುನಃ ಅದೇ ಸ್ಥಳದಲ್ಲಿ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು ಎಂಬುದಾಗಿ ಸರ್ಕಾರ ಲಿಖಿತವಾಗಿ ತಿಳಿಸಬೇಕು. ಹಾಗಾದಾಗ ಮಾತ್ರ ತಾತ್ಕಾಲಿಕ ಸ್ಥಳಾಂತರಕ್ಕೆ ನಮ್ಮ ವಿರೋಧ ಇಲ್ಲ~ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ `ಪ್ರಜಾವಾಣಿ~ಗೆ ತಿಳಿಸಿದರು.
ವಿವಾದದ ಹಿನ್ನೆಲೆ: ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಕ್ಕೆ ದಲಿತ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದರಿಂದಾಗಿ ಕೆಲವು ತಿಂಗಳುಗಳಿಂದ ಮೆಟ್ರೊ ಕಾಮಗಾರಿಗೆ ಹಿನ್ನಡೆ ಉಂಟಾಗಿತ್ತು. ಸ್ಥಳಾಂತರ ವಿವಾದಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಹಾಗೂ ದಲಿತ ಸಂಘಟನೆಗಳು ಒಮ್ಮತಕ್ಕೆ ಬಾರದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ತಜ್ಞರ ಅಭಿಪ್ರಾಯ ಪಡೆಯಲು ಮುಂದಾಗಿತ್ತು.
2011ರ ಡಿಸೆಂಬರ್ನಲ್ಲಿ ಮದ್ರಾಸ್ ಐಐಟಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದವರಲ್ಲಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಲಾಗಿತ್ತು. ಸಿವಿಲ್ ಎಂಜಿನಿಯರಿಂಗ್ ವಿಭಾಗ ಸಮೀಕ್ಷೆ ನಡೆಸಿ ಜನವರಿಯಲ್ಲಿ ವರದಿ ಸಲ್ಲಿಸಿತ್ತು. ಸಿವಿಲ್ ಎಂಜಿನಿಯರಿಂಗ್ ವಿಭಾಗದ ಭೂಗರ್ಭ ತಂತ್ರಜ್ಞಾನ ಎಂಜಿನಿಯರಿಂಗ್ ಶಾಖೆಯ ಪ್ರೊ. ಎಸ್.ಆರ್. ಗಾಂಧಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
1981ರ ಆಗಸ್ಟ್ 19ರಂದು ಆಗಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರು ಅಂಬೇಡ್ಕರ್ ಪ್ರತಿಮೆ ಅನಾವರಣ ಮಾಡಿದ್ದರು. 15.6 ಅಡಿ ಎತ್ತರದ ಈ `ಪಂಚಲೋಹ~ ಪ್ರತಿಮೆ 1.6 ಟನ್ ತೂಕ ಇದೆ. ಪ್ರತಿಮೆಯ ತಳಪಾಯ 5.5 ಅಡಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.