ADVERTISEMENT

ಬಡತನ, ಆರೋಗ್ಯ ಸವಾಲು ಎದುರಿಸಲು ಸಿದ್ಧರಾಗಿ: ಸಲಹೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 19:59 IST
Last Updated 3 ಸೆಪ್ಟೆಂಬರ್ 2013, 19:59 IST

ಬೆಂಗಳೂರು: `ಮಕ್ಕಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಇದಕ್ಕಾಗಿಯೇ ದೇಶ ಜಾಗತಿಕ ಮಟ್ಟದಲ್ಲಿ ಅಪಖ್ಯಾತಿಗೆ ಒಳಗಾಗಿರುವುದು ಆತಂಕಕಾರಿ ವಿಚಾರ' ಎಂದು ಟಾಟಾ ವೈದ್ಯಕೀಯ ಕೇಂದ್ರದ ನಿರ್ದೇಶಕ ಡಾ.ಮಮೇನ್ ಚಾಂಡಿ ತಿಳಿಸಿದರು.

ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ನಗರದ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

`ಬಡತನದಿಂದ  ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ದಿನಕ್ಕೊಂದು ಕಾಯಿಲೆ ಪತ್ತೆಯಾಗುತ್ತಿರುವುದರಿಂದ  ವೈದ್ಯ ಲೋಕದ ಮುಂದೆ ಹಲವು ಸವಾಲುಗಳಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುವತ್ತ ಯುವಜನತೆ ಮುಂದಾಗಬೇಕು' ಎಂದು ಸಲಹೆ ನೀಡಿದರು.
`ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಪಟ್ಟಂತೆ ಪತ್ತೆಯಾಗುವ ರೋಗಗಳ ಬಗ್ಗೆ ಉನ್ನತ ಸಂಶೋಧನೆಯನ್ನು  ಸದಾ ಜಾರಿಯಲ್ಲಿಡುವ ಅಗತ್ಯವಿದೆ. ಈ ದಿಸೆಯಲ್ಲಿ ವೈದ್ಯಕೀಯ ಕಾಲೇಜುಗಳು ಹೊಸ ಸಂಶೋಧನಾ ಯೋಜನೆಗಳನ್ನು ರೂಪಿಸಬೇಕು' ಎಂದು ಅವರು ಸಲಹೆ ನೀಡಿದರು.

ಸಾಮಾನ್ಯ ವೈದ್ಯಕೀಯ, ಜೀವವೈದ್ಯಕೀಯ, ದೇಹರಚನಾಶಾಸ್ತ್ರ, ಸಮುದಾಯ ಆರೋಗ್ಯ ವಿಷಯಗಳಲ್ಲಿ  ಅತಿ ಹೆಚ್ಚು ಅಂಕ ಪಡೆದ ಡಾ.ಎಲ್.ನಮ್ರತಾ ಹಾಗೂ ಡಾ.ಸಿ.ಹರೀಶ್ ಅವರು ಈ ಸಂದರ್ಭ ಗಮನ ಸೆಳೆದರು.

ಇದಲ್ಲದೇ ಎಂಬಿಬಿಎಸ್‌ನ ನಾಲ್ಕು ವರ್ಷವೂ ಎಲ್ಲ ವಿಷಯಗಳಲ್ಲೂ ಹೆಚ್ಚಿನ ಅಂಕ ಪಡೆದ ಡಾ. ಅಕ್ಷತಾ ಹುದ್ದಾರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಗೋಕುಲ ಪ್ರತಿಷ್ಠಾನದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಡಿ.ವಿ.ಗುರುಪ್ರಸಾದ್,  ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಆರ್.ಜಯರಾಮ್, ನಿರ್ದೇಶಕ ಎಂ.ಆರ್.ಆನಂದರಾಮ್ ಒಳಗೊಂಡಂತೆ ಹಲವರು ಪದವಿ ಪ್ರದಾನ ಸಮಾರಂಭದಲ್ಲಿ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.