ADVERTISEMENT

ಬನ್ನೇರುಘಟ್ಟಕ್ಕೆ ಬಂದ ಮೈಸೂರು ಮಿತ್ರರು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 19:55 IST
Last Updated 7 ಏಪ್ರಿಲ್ 2012, 19:55 IST

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಪ್ರಾಣಿ ವಿನಿಮಯ ಯೋಜನೆಯಡಿ ಮೈಸೂರು ಮೃಗಾಲಯದಿಂದ 26 ಪ್ರಾಣಿಗಳನ್ನು ಕರೆತರಲಾಗಿದೆ ಎಂದು ಉದ್ಯಾನದ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಆರ್.ರಾಜು ಶನಿವಾರ ತಿಳಿಸಿದ್ದಾರೆ.

ಒಂದು ಬಿಳಿ ನವಿಲು, ಐದು ಕಾಡುಕೋಳಿ (ಜೀವಂಜೀವ), ಏಳು ಜಿಂಕೆ ಹಾಗೂ ಮೂರು ವಿಭಿನ್ನ ಜಾತಿಯ ಎಂಟು ಮೊಸಳೆಗಳನ್ನು ಉದ್ಯಾನಕ್ಕೆ ತರಲಾಗಿದೆ ಎಂದು ಅವರು `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.

ಇದರಿಂದಾಗಿ ಉದ್ಯಾನದ ಪ್ರಾಣಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು 74 ತಳಿಗಳ 1448 ಪ್ರಾಣಿಗಳು ಉದ್ಯಾನದಲ್ಲಿ ನೆಲೆಸಿದಂತಾಗಿದೆ.

ಮೃಗಾಲಯ ಪ್ರಾಧಿಕಾರದ 120ನೇ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರಾಣಿ ಸಂಗ್ರಹಣಾ ಯೋಜನೆಗೆ ಅನುಮೋದನೆ ದೊರೆತಿದ್ದು ವಿವಿಧ ರೀತಿಯ ಪ್ರಾಣಿಗಳ ತಳಿಗಳನ್ನು ದೇಶ ಹಾಗೂ ವಿದೇಶಗಳಿಂದ ಉದ್ಯಾನಕ್ಕೆ ಮುಂದಿನ ವರ್ಷ ತರಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ.
 
ಒಂಟಿ ಪ್ರಾಣಿಗಳಿಗೆ ಸಂಗಾತಿಗಳನ್ನು ಜೋಡಿವುದಕ್ಕೂ ಈ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ. ಚಿಂಪಾಂಜಿ, ಜಿರಾಫೆ, ಜೀಬ್ರಾ, ಚಿಂಕಾರ, ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್, ಮೌಸ್‌ಡೀರ್ ಮತ್ತಿತರ ಪ್ರಾಣಿಗಳನ್ನು ಉದ್ಯಾನಕ್ಕೆ ಸೇರ್ಪಡೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ರಾಜು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.