ಬೆಂಗಳೂರು: ಪಾರಂಪರಿಕ ಬಾಲಬ್ರೂಯಿ ಅತಿಥಿಗೃಹವನ್ನು ತೆರವುಗೊಳಿಸುವ ನಿರ್ಧಾರವನ್ನು ಸರ್ಕಾರ ಕೈಬಿಡಬೆಕು ವಿವಿಧ ಸಂಘಟನೆಗಳ ಸದಸ್ಯರು ವಿರೋಧಿಸಿದ್ದಾರೆ.
ಬಿ.ಪ್ಯಾಕ್, ಇನ್ಟ್ಯಾಕ್ ಮತ್ತು ‘ಬೈ–ಗಾನ್ ಬೆಂಗಳೂರು’ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಗುರುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಸಭೆ ನಡೆಸಿ, ಪಾರಂಪರಿಕ ಬಾಲಬ್ರೂಯಿ ಅತಿಥಿ ಗೃಹವನ್ನು ತೆರವುಗೊಳಿಸುವ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ವಾಸ್ತು ಸರಿಯಿಲ್ಲ ಎಂಬ ಕಾರಣಕ್ಕೆ ಅತಿಥಿಗೃಹ ತೆರವುಗೊಳಿಸಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಇಂತಹ ಕಾರಣಗಳಿಗೆ ಅತಿಥಿಗೃಹವನ್ನು ತೆರವುಗೊಳಿಸುವುದು ಸರಿಯಲ್ಲ. ಮೂಲ ಕಟ್ಟಡಕ್ಕೆ ಯಾವ ಕಾರಣಕ್ಕೂ ಹಾನಿ ಮಾಡಬಾರದು ಎಂದು ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರೊಬ್ಬರು ಹೇಳಿದರು.
‘ಅತಿಥಿಗೃಹದ ಕಟ್ಟಡದಿಂದ ತಡೆಗೋಡೆವರೆಗೆ 150 ಅಡಿ ಜಾಗ ಇದೆ. ಅಗತ್ಯ ಇದ್ದರೆ ಆ ಜಾಗವನ್ನು ಬಳಸಿಕೊಳ್ಳಬೇಕು. ರಾಜ್ಯದಲ್ಲಿ 2004 ರಲ್ಲಿ 1,800ಕ್ಕೂ ಹೆಚ್ಚು ಐತಿಹಾಸಿಕ ಕಟ್ಟಡಗಳಿದ್ದವು. ಅದರಲ್ಲಿ ಈಗ ಕೆಲವು ಮಾತ್ರ ಈ ಉಳಿದಿವೆ. ಕರ್ನಾಟಕ ನಗರ ಯೋಜನೆ ಕಾಯ್ದೆ ಅಡಿ ಬಾಲಬ್ರೂಯಿ ಅತಿಥಿ ಗೃಹ ಸೇರಿದಂತೆ ಇತರ ಕಟ್ಟಡಗಳನ್ನು ರಕ್ಷಣೆ ಮಾಡಬೇಕು’ ಎಂದು ‘ಬೈ–ಗಾನ್ ಬೆಂಗಳೂರು’ ಸಂಘಟನೆಯ ಸದಸ್ಯರೊಬ್ಬರು ಒತ್ತಾಯಿಸಿದರು.
ಬಾಲಬ್ರೂಯಿ ಅತಿಥಿಗೃಹವನ್ನು ತೆರವುಗೊಳಿಸುವುದನ್ನು ನಿಲ್ಲಿಸಬೇಕು ಎಂದು ಬಹುಜನ ಸಮಾಜ ಪಕ್ಷವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಅಲ್ಲದೆ ಹಲವು ಆನ್ಲೈನ್ ಅರ್ಜಿಗಳು ಸಲ್ಲಿಕೆಯಾಗಿವೆ.
ಸಾಮಾಜಿಕ ಜಾಲತಾಣಗಳ ಮೂಲಕವೂ ಜನರು ಬಾಲಬ್ರೂಯಿ ಅತಿಥಿಗೃಹವನ್ನು ರಕ್ಷಣೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ವ್ಯಕ್ತಿಯೊಬ್ಬರು ತಮ್ಮ ಫೇಸ್ಬುಕ್ ಖಾತೆಯಲ್ಲಿ ‘ಬಾಲಬ್ರೂಯಿ ಅತಿಥಿಗೃಹವನ್ನು ರಕ್ಷಿಸಿ ’ ಎಂದು ಬರೆದುಕೊಂಡಿದ್ದಾರೆ. ಅದಕ್ಕೆ 160 ಮಂದಿ ಅಭಿಮತ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.