ಬೆಂಗಳೂರು: ‘ಮಾಗಡಿ ರಸ್ತೆಯ ಚೋಳರಪಾಳ್ಯದಲ್ಲಿ ಬಿಜೆಪಿ ಮುಖಂಡರೊಬ್ಬರ ಮೂವರು ಬೆಂಬಲಿಗರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಆರೋಪಿಸಿ ಮಾನವ ಹಕ್ಕುಗಳ ಸಂಘದ ದಕ್ಷಿಣ ವಲಯದ ಅಧ್ಯಕ್ಷೆ ಟಿ.ಮಹಾಲಕ್ಷ್ಮಿ ಅವರು ಕೆ.ಪಿ.ಅಗ್ರಹಾರ ಠಾಣೆಗೆ ಗುರುವಾರ ದೂರು ಕೊಟ್ಟಿದ್ದಾರೆ.
ಚೋಳರಪಾಳ್ಯದ ಬಿಜೆಪಿ ಮುಖಂಡ ರವೀಂದ್ರ ಬೆಂಬಲಿಗರಾದ ನವೀನ್, ರೋಹಿತ್ ಅವರು ನನಗೆ ಹಣ ನೀಡಬೇಕು. ಕೆಲ ತಿಂಗಳಿನಿಂದ ಹಣ ನೀಡದೆ ಸತಾಯಿಸುತ್ತಿದ್ದರು. ಈ ಬಗ್ಗೆ ಒತ್ತಡ ಹೇರಿದ್ದಕ್ಕೆ, ‘ನಮಗೆ ರವೀಂದ್ರ ಅವರ ಬೆಂಬಲವಿದೆ. ಹಣ ಹಿಂದಿರುಗಿಸುವುದಿಲ್ಲ’ ಎಂದು ಅವರು ಹೇಳಿದ್ದರು ಎಂದು ಮಹಾಲಕ್ಷ್ಮಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಇದೇ ವಿಚಾರವಾಗಿ ಗುರುವಾರ ಸಂಜೆ ನನ್ನ ಕಚೇರಿಗೆ ಬಂದ ನವೀನ್, ರೋಹಿತ್ ಹಾಗೂ ಮತ್ತೊಬ್ಬ ಅಪರಿಚಿತ ವ್ಯಕ್ತಿ, ‘20 ದಿನಗಳ ಹಿಂದೆಯೇ ನಿನ್ನನ್ನು ಮುಗಿಸಬೇಕಿತ್ತು. ಇಂದು ಕೊಲೆ ಮಾಡದೆ ಬಿಡುವುದಿಲ್ಲ. ಜೈಲಿಗೆ ಹೋದರೆ ರವೀಂದ್ರ ಅವರು ನಮ್ಮನ್ನು ಬಿಡಿಸಿಕೊಂಡು ಬರುತ್ತಾರೆ’ ಎಂದು ಬೆದರಿಕೆ ಹಾಕಿದ್ದರು.’
‘ಈ ವೇಳೆ ಅವರ ವಿರುದ್ಧ ಜೋರು ಧ್ವನಿಯಲ್ಲಿ ಮಾತನಾಡಿದ್ದೆ. ಆಗ, ಅಪರಿಚಿತ ವ್ಯಕ್ತಿ ನನ್ನ ಬಾಯಿ ಮುಚ್ಚಿಡಿದಿದ್ದ. ನವೀನ್ ಹಾಗೂ ರೋಹಿತ್ ಕಬ್ಬಿಣದ ಸಲಾಕೆಯಿಂದ ತಲೆ ಹಾಗೂ ತೋಳಿಗೆ ಹೊಡೆದರು. ಅವರಿಂದ ಬಿಡಿಸಿಕೊಂಡು ಜೋರಾಗಿ ಚೀರಿಕೊಂಡೆ. ಆರೋಪಿಗಳು ಸ್ಥಳದಿಂದ ಕಾಲ್ಕಿತ್ತರು. ಬಳಿಕ ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಾಗಿದ್ದೆ’ ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಿದ್ದೇವೆ. ತಲೆಮರೆಸಿಕೊಂಡ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದೇವೆ. ವಿಚಾರಣೆಗೆ ಹಾಜರಾಗುವಂತೆ ಬಿಜೆಪಿ ಮುಖಂಡ ರವೀಂದ್ರ ಅವರಿಗೆ ನೋಟಿಸ್ ನೀಡುತ್ತೇವೆ ಎಂದು ಕೆ.ಪಿ.ಅಗ್ರಹಾರ ಪೊಲಿಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.