ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೌಕರರ ಅಂತರ ವರ್ಗಾವಣೆಗೆ ಆ. 8ರಿಂದ ಕೌನ್ಸೆಲಿಂಗ್ ಆರಂಭವಾಗಲಿದ್ದು, ಈ ಕಾರ್ಯಕ್ಕಾಗಿ ಆರು ತಂಡಗಳನ್ನು ರಚಿಸಲಾಗಿದೆ.
ರಾಜ್ಕುಮಾರ್ ಗಾಜಿನಮನೆ, ಮಲ್ಲೇಶ್ವರದ ಐಪಿಪಿ ಕೇಂದ್ರದ ಮುಖ್ಯ ಸಭಾಂಗಣ, ಅದೇ ಕೇಂದ್ರದ ಮೊದಲನೇ ಮಹಡಿ ಸಭಾಂಗಣ, ಅನೆಕ್ಸ್ ಕಟ್ಟಡದ ಸಭಾಂಗಣ, ಮೆಯೊಹಾಲ್ ಹಾಗೂ ಟೌನ್ಹಾಲ್ನಲ್ಲಿ ಏಕಕಾಲಕ್ಕೆ ಮೂರು ದಿನಗಳವರೆಗೆ ಕೌನ್ಸೆಲಿಂಗ್ ನಡೆಯಲಿದೆ.
ಉಪ ಆಯುಕ್ತ ಮಲ್ಲಿಕಾರ್ಜುನ, ಸಹಾಯಕ ಆಯುಕ್ತರಾದ ಹರಿಶಿಲ್ಪ, ಪಿ.ಎಂ.ನಂದಿನಿ, ಮಲ್ಲಿಕಾರ್ಜುನ, ಶಿವಕುಮಾರ್, ಕೌನ್ಸಿಲ್ ಕಾರ್ಯದರ್ಶಿ ಕೆ.ಎ. ಪಲ್ಲವಿ ಕೌನ್ಸೆಲಿಂಗ್ ತಂಡಗಳ ನೇತೃತ್ವ ವಹಿಸಲಿದ್ದಾರೆ. ವರ್ಗಾವಣೆ ಪ್ರಕ್ರಿಯೆ ಸುಗಮವಾಗಿ ನಡೆಯಲು ಮಾರ್ಗಸೂಚಿಯನ್ನೂ ಸಿದ್ಧಪಡಿಸಲಾಗಿದೆ.
ಯಾವುದೇ ನೌಕರ ಒಂದು ವಲಯದಲ್ಲಿ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದ್ದರೆ ಬೇರೊಂದು ವಲಯಕ್ಕೆ ವರ್ಗಗೊಳ್ಳಲು ಅರ್ಹ. ಅದರಂತೆಯೇ ವರ್ಗಾವಣೆಗೆ ಅರ್ಹರ ಪಟ್ಟಿ ಸಿದ್ಧಪಡಿಸಲಾಗಿದೆ. ವರ್ಗಾವಣೆಗೆ ಎಷ್ಟು ಹುದ್ದೆಗಳಲ್ಲಿ ಇದ್ದವರನ್ನು ಗುರುತಿಸಲಾಗಿದೆಯೋ ಆ ಹುದ್ದೆಗಳು ಖಾಲಿ ಇವೆ ಎಂದು ಭಾವಿಸಲಾಗುತ್ತದೆ.
ಖಾಲಿ ಇರುವ ಹುದ್ದೆಗಳಿಗೆ ಕೌನ್ಸೆಲಿಂಗ್ ಮೂಲಕ ನೌಕರರ ವರ್ಗ ಮಾಡಲಾಗುತ್ತದೆ. ಒಂದೇ ಹುದ್ದೆಗೆ ಒಬ್ಬರಿಗಿಂತ ಹೆಚ್ಚು ನೌಕರರು ಬೇಡಿಕೆ ಇಟ್ಟರೆ ಸೇವಾ ಹಿರಿತನದ ಆಧಾರದ ಮೇಲೆ ನಿರ್ಣಯ ಕೈಗೊಳ್ಳಲಾಗುತ್ತದೆ.
ಹಿರಿತನದ ಆಧಾರದ ಮೇಲೆ ಪ್ರತಿಸಲ 20 ಜನರ ತಂಡವನ್ನು ಕೌನ್ಸೆಲಿಂಗ್ಗೆ ಕರೆಯಲಾಗುತ್ತದೆ. ಮೊದಲು ಅವಕಾಶ ಗಿಟ್ಟಿಸಿದವರು ಆಯ್ಕೆ ಮಾಡಿಕೊಂಡ ಹುದ್ದೆಯನ್ನು ಬ್ಲಾಕ್ ಮಾಡಲಾಗುತ್ತದೆ.
ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಆದೇಶ ಪಡೆದವರಿಗೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಮತ್ತೆ ವರ್ಗಾವಣೆಗೆ ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.