ಬೆಂಗಳೂರು: ನಗರದಲ್ಲಿ ಮತ್ತೆ ಉದ್ಭವಿಸಿರುವ ಕಸದ ಸಮಸ್ಯೆ ಕುರಿತ ತುರುಸಿನ ಚರ್ಚೆ ಬುಧವಾರ ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಭೆಯಲ್ಲಿ ಕಿಡಿ ಹೊತ್ತಿಸಿತು.
ನಗರದ ಹಲವು ವಾರ್ಡ್ಗಳಲ್ಲಿ ತ್ಯಾಜ್ಯ ನಿರ್ವಹಣೆ ಗುತ್ತಿಗೆ ಪಡೆದ ಬಿವಿಜಿ ಇಂಡಿಯಾ ಸಂಸ್ಥೆಯ ವಿರುದ್ಧ ಆಡಳಿತ ಪಕ್ಷವೂ ಸೇರಿದಂತೆ ಎಲ್ಲ ಸದಸ್ಯರು ಪಕ್ಷಭೇದ ಮರೆತು ಕಿಡಿ ಕಾರಿದರು. ಬಿವಿಜಿ ಇಂಡಿಯಾ ಸಂಸ್ಥೆ ಗುತ್ತಿಗೆ ಒಪ್ಪಂದಗಳನ್ನು ಉಲ್ಲಂಘಿಸಿದ್ದು, ಕಸದ ನಿರ್ವಹಣೆಯಲ್ಲೂ ವಿಫಲವಾಗಿದೆ. ಆ ಸಂಸ್ಥೆಗೆ ನೀಡಿದ ಗುತ್ತಿಗೆಯನ್ನು ರದ್ದುಗೊಳಿಸಬೇಕು ಎಂದು ಪಟ್ಟುಹಿಡಿದರು.
ಬಿಜೆಪಿಯ ಸಿ.ಕೆ. ರಾಮಮೂರ್ತಿ, ಎಸ್.ಕೆ. ನಟರಾಜ್, ಗಂಗಬೈರಯ್ಯ, ಎಸ್. ಹರೀಶ್, ಎಂ.ನಾಗರಾಜ್, ಚಂದ್ರಶೇಖರ ರಾಜು, ಕಾಂಗ್ರೆಸ್ನ ಯಶೋಧಮ್ಮ ಕೃಷ್ಣಪ್ಪ, ಎಂ.ನಾಗರಾಜ್ ಮತ್ತಿತರರು, ‘ಟೆಂಡರ್ ನಿಯಮ ಉಲ್ಲಂಘನೆ ಮಾಡಿದ ಗುತ್ತಿಗೆದಾರರಿಗೆ ಅಧಿಕಾರಿಗಳು ಇದುವರೆಗೆ ಎಷ್ಟು ದಂಡ ವಿಧಿಸಿದ್ದಾರೆ ಎನ್ನುವ ಮಾಹಿತಿ ನೀಡಬೇಕು’ ಎಂದು ಪಟ್ಟು ಹಿಡಿದು ಕೇಳಿದರು.
‘ಮುಖ್ಯಮಂತ್ರಿಗಳು ನಗರದ 20 ವಾರ್ಡ್ಗಳನ್ನು ಕಸಮುಕ್ತ ಪ್ರದೇಶಗಳು ಎಂಬ ಘೋಷಣೆ ಮಾಡಿದ್ದಾರೆ. ಅದರಲ್ಲಿ ನನ್ನ ವಾರ್ಡ್ ಸಹ ಸೇರಿದೆ. ವಾರ್ಡ್ನಲ್ಲಿ ಕಸ ಹಾಗೇ ಬಿದ್ದಿದೆ. ಆದರೆ, ಗುತ್ತಿಗೆದಾರರಿಗೆ ಮಾತ್ರ ಹಣ ಪಾವತಿ ಆಗುತ್ತಿದೆ’ ಎಂದು ರಾಮಮೂರ್ತಿ ದೂರಿದರು. ‘ಜನ ಕಸವನ್ನು ಬೇರ್ಪಡಿಸಿಕೊಟ್ಟರೂ ಗುತ್ತಿಗೆದಾರರು ಮಾತ್ರ ಎಲ್ಲ ತ್ಯಾಜ್ಯವನ್ನು ಒಟ್ಟಾಗಿ ಸಾಗಿಸುತ್ತಿದ್ದಾರೆ’ ಎಂದು ಚಂದ್ರಶೇಖರ ರಾಜು ಹೇಳಿದರು.
‘ನಮ್ಮ ವಾರ್ಡ್ನಲ್ಲಿ ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ ಎಂದು ಹಲವು ಸಲ ದೂರಿದರೂ ಇದುವರೆಗೆ ಏಕೆ ಅವರ ಗುತ್ತಿಗೆಯನ್ನು ರದ್ದುಗೊಳಿಸಿಲ್ಲ’ ಎಂದು ಯಶೋಧಮ್ಮ ಪ್ರಶ್ನಿಸಿದರು. ಆಡಳಿತ ಪಕ್ಷದ ನಾಯಕ ಅಶ್ವತ್ಥ-ನಾರಾಯಣ ರೆಡ್ಡಿ ಹಾಗೂ ವಿರೋಧ ಪಕ್ಷದ ನಾಯಕ ಮಂಜುನಾಥ್ ರೆಡ್ಡಿ ಸಹ ಅದಕ್ಕೆ ದನಿಗೂಡಿಸಿದರು.
‘ನಗರ ಯೋಜನೆ ವಿಭಾಗದ ಅಧಿಕಾರಿಗಳು ಸಹ ಘನತ್ಯಾಜ್ಯ ನಿರ್ವಹಣೆ ಜವಾಬ್ದಾರಿಯನ್ನು ಹೊರಬೇಕು ಎಂಬ ಸೂಚನೆ ನೀಡಲಾಗಿದ್ದರೂ ಆ ವಿಭಾಗದ ಯಾವೊಬ್ಬ ಅಧಿಕಾರಿಯೂ ಇದುವರೆಗೆ ಕಸದ ನಿರ್ವಹಣೆಗೆ ಮುಂದಾ-ಗಿಲ್ಲ’ ಎಂದು ದೂರಿದರು.
‘4,000 ಪೌರ ಕಾರ್ಮಿಕರನ್ನು ನೇಮಕ ಮಾಡಲು ಈ ಹಿಂದೆಯೇ ತೀರ್ಮಾನಿಸಲಾಗಿದ್ದು, ರಾಜ್ಯ ಸರ್ಕಾರದ ಅನುಮತಿ ಕೂಡ ಸಿಕ್ಕಿದೆ. ಇದುವರೆಗೆ ಅಧಿಸೂಚನೆಯನ್ನು ಏಕೆ ಹೊರಡಿಸಿಲ್ಲ’ ಎಂದು ಕಾಂಗ್ರೆಸ್ನ ಟಿ. ಮಲ್ಲೇಶ್ ಪ್ರಶ್ನಿಸಿದರು.
ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮಿನಾರಾಯಣ, ‘ಯಲಹಂಕ ವಾರ್ಡ್ನಲ್ಲಿ ಬಿವಿಜಿ ಇಂಡಿಯಾ ಸಂಸ್ಥೆಗೆ ನೀಡಲಾಗಿದ್ದ ಗುತ್ತಿಗೆಯನ್ನು ರದ್ದುಗೊಳಿಸಲಾಗಿತ್ತು. ಬಿಬಿಎಂಪಿ ಕೈಗೊಂಡ ಈ ಕ್ರಮದ ವಿರುದ್ಧ ಆ ಸಂಸ್ಥೆ ಹೈಕೋರ್ಟ್ಗೆ ಮೊರೆ ಹೋಗಿತ್ತು. ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ನಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳಲು ಹಲವು ದಾಖಲೆಗಳನ್ನು ಸಲ್ಲಿಸಿದ್ದೇವೆ’ ಎಂದು ವಿವರಿಸಿದರು.
ಟೆಂಡರ್ ನಿಯಮಾವಳಿ ಸಿದ್ಧಪಡಿಸುವಾಗ ಆಗಿರುವ ಲೋಪಗಳ ಬಗೆಗೆ ಆಯುಕ್ತರು ಸದಸ್ಯರ ಗಮನ ಸೆಳೆದರು. ‘ಇಂತಿಷ್ಟು ಪ್ರದೇಶಕ್ಕೆ ಇಷ್ಟು ಪೌರ ಕಾರ್ಮಿಕರು ಇರಬೇಕು, ವಾಹನಗಳು ಇಷ್ಟಿರಬೇಕು ಮೊದಲಾದ ನಿಯಮಗಳನ್ನು ರೂಪಿಸಬೇಕಿತ್ತು. ಆಗ ಗುತ್ತಿಗೆದಾರರು ನಿಯಮ ಉಲ್ಲಂಘಿಸುವುದು ಕಷ್ಟವಾಗುತ್ತಿತ್ತು’ ಎಂದು ಹೇಳಿದರು.
‘ನಗರ ಯೋಜನೆ ಅಧಿಕಾರಿಗಳನ್ನು ಕಸದ ನಿರ್ವಹಣೆಗೆ ನಿಯೋಜನೆ ಮಾಡಲಾಗುವುದು. ಪ್ರತಿಯೊಬ್ಬರಿಗೂ ಜವಾಬ್ದಾರಿಯನ್ನೂ ನಿಗದಿ ಮಾಡಲಾಗುವುದು. ಘನತ್ಯಾಜ್ಯ ನಿರ್ವಹಣೆ ಹೊಣೆಯನ್ನು ಇನ್ನು ಮುಂದೆ ಆರೋಗ್ಯ ಅಧಿಕಾರಿಗಳು ಹೊರಲಿದ್ದು, ನಗರ ಯೋಜನೆ ಅಧಿಕಾರಿಗಳು ಸಹಕರಿಸಲಿದ್ದಾರೆ. ಎಂಜಿನಿಯರ್ಗಳು ಕಟ್ಟಡ ತ್ಯಾಜ್ಯ ಮತ್ತು ಚರಂಡಿ ಹೂಳು ಎತ್ತುವ ಕೆಲಸಗಳ ಕಡೆಗೆ ಗಮನಹರಿಸಲಿದ್ದಾರೆ’ ಎಂದು ವಿವರಿಸಿದರು.
‘ಜೂನ್ ತಿಂಗಳಾಂತ್ಯದ ಒಳಗೆ ಪೌರ ಕಾರ್ಮಿಕರ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗುವುದು’ ಎಂದು ಅವರು ಸ್ಪಷ್ಟಪಡಿಸಿದರು.
ತ್ಯಾಜ್ಯ ಸಂಸ್ಕರಣಾ ಘಟಕ: ದೊಡ್ಡಬಳ್ಳಾಪುರ ಹತ್ತಿರದ ಉದ್ದೇಶಿತ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸಂಬಂಧಿಸಿದಂತೆ ವಿವರಗಳನ್ನು ನೀಡಬೇಕು ಎಂದು ವಾರ್ಡ್ಮಟ್ಟದ ಕಾಮಗಾರಿಗಳ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಎಚ್. ಬಸವರಾಜು, ಬಿ.ವಿ. ಗಣೇಶ್ ಮತ್ತಿತರರು ಆಗ್ರಹಿಸಿದರು. ‘ಘಟಕ ಸ್ಥಾಪನೆಗೆ ಮುಂದಾಗಿರುವ ಗುತ್ತಿಗೆದಾರರು ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ ನಿರಾಕ್ಷೇಪಣೆ (ಎನ್ಒಸಿ) ಪತ್ರ ಪಡೆದಿದ್ದಾರೆಯೇ’ ಎಂದು ಪ್ರಶ್ನಿಸಿದರು.
‘ಮಂಡೂರಿನಲ್ಲಿ ಈಗಾಗಲೇ ಸಮಸ್ಯೆ ಎದುರಾಗಿದೆ. ದೊಡ್ಡಬಳ್ಳಾಪುರ ಬಳಿಯ ಉದ್ದೇಶಿತ ಘಟಕಕ್ಕೆ ಸಂಪರ್ಕ ರಸ್ತೆಯೇ ಇಲ್ಲವೆಂದು ಹೇಳಲಾಗಿದೆ. ಪರಿಸ್ಥಿತಿ ಹೀಗಿರುವಾಗ ಅಲ್ಲಿ ಘಟಕ ಸ್ಥಾಪನೆಯಿಂದ ಏನೂ ಪ್ರಯೋಜನವಿಲ್ಲ’ ಎಂದು ಬಸವರಾಜು ಹೇಳಿದರು.
ಇದಕ್ಕೆ ಸಮಜಾಯಿಷಿ ನೀಡಿದ ಆಯುಕ್ತರು, ‘ಇದೊಂದು ಸುರಕ್ಷಿತ ಯೋಜನೆ’ ಎಂದು ತಿಳಿಸಿದರು. ‘2013ರ ಮಾರ್ಚ್ನಲ್ಲೇ ಟೆಂಡರ್ ಕರೆಯಲಾಗಿತ್ತು. ಎಂಎಸ್ಜಿಪಿ ಇನ್ಫ್ರಾಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಗುತ್ತಿಗೆ ಪಡೆದಿದ್ದು, ಆ ಸಂಸ್ಥೆಯೇ ಭೂಮಿ ಪಡೆದು, ಘಟಕಗಳನ್ನು ಹಾಕುತ್ತಿದೆ’ ಎಂದು ಮಾಹಿತಿ ನೀಡಿದರು.
‘ಬಿಬಿಎಂಪಿಯಿಂದ ಯಾವುದೇ ಬಂಡವಾಳ ಹಾಕುವ ಅಗತ್ಯವಿಲ್ಲ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ)ಯಿಂದ ಅನುಮತಿ ಪತ್ರ ಪಡೆದರೆ ಮುಗಿಯಿತು. ಉಳಿದೆಲ್ಲ ಜವಾಬ್ದಾರಿಯೂ ಗುತ್ತಿಗೆ ಪಡೆದ ಸಂಸ್ಥೆಯದ್ದೇ ಆಗಿದೆ’ ಎಂದು ಹೇಳಿದರು.
‘ಘಟಕ ಸ್ಥಾಪನೆಗೆ ಉದ್ದೇಶಿಸಲಾದ ಭೂಮಿಯನ್ನು ಪರಿಶೀಲಿಸಲು ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಮೇಯರ್ ಬಿ.ಎಸ್. ಸತ್ಯನಾರಾಯಣ ಸ್ಪಷ್ಟಪಡಿಸಿದರು. ‘ಕಸದ ಸಮಸ್ಯೆ ಬಗೆಹರಿಸುವ ಸಲುವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಶೀಘ್ರವೇ ಜಿಲ್ಲಾ ಉಸ್ತುವಾರಿ ಸಚಿವ ಆರ್.ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ನಗರದ ಎಲ್ಲ ಶಾಸಕರು ಮತ್ತು ಬಿಬಿಎಂಪಿ ಸದಸ್ಯರ ಸಭೆ ಕರೆಯಲಾಗುವುದು’ ಎಂದು ಅವರು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.