ADVERTISEMENT

ಬೀಜದ ದಂಟಿನ ಬೇಸಾಯದ ಜಾಗೃತಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 4:45 IST
Last Updated 6 ಫೆಬ್ರುವರಿ 2012, 4:45 IST

ಯಲಹಂಕ: ರೈತರ ಹಿತ ಗಮನದಲ್ಲಿಟ್ಟುಕೊಂಡು ಹೊಸ ಬೆಳೆ ಪರಿಚಯ ಮಾಡಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ನಾರಾಯಣಗೌಡ ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ಪೂರ್ಣ ಬಳಕೆಯಾಗಿರದ ಬೆಳೆಗಳ ವಿಭಾಗ ಹಾಗೂ ನಬಾರ್ಡ್ ಪ್ರಾದೇಶಿಕ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ `ಬೀಜದ ದಂಟಿನ ಪೌಷ್ಟಿಕ ಗುಣಗಳು ಮತ್ತು ಬೇಸಾಯ~ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಕೇವಲ ರೈತರಿಗೆ ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡಿದರೆ ಸಾಲದು. ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು~ ಎಂದು ಸಲಹೆ ಮಾಡಿದರು.

ರೈತರು ಪೌಷ್ಟಿಕ ಬೆಳೆಗಳನ್ನು ಬೆಳೆದು ತಾವು ಉಪಯೋಗಿಸುವುದರ ಜೊತೆಗೆ ತಮ್ಮ ಸುತ್ತಮುತ್ತಲಿನ ಜನರಲ್ಲಿಯೂ ಅರಿವು ಮೂಡಿಸಿ ಉಪಯೋಗಿಸುವಂತೆ ಪ್ರೇರೇಪಿಸಬೇಕು ಎಂದು ಸಲಹೆ ಮಾಡಿದರು.

ನಬಾರ್ಡ್‌ನ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಸ್.ಎಸ್.ತಾಯಡೆ ಮಾತನಾಡಿ, ಗ್ರಾಮೀಣ ಭಾಗದ ರೈತರಿಗಾಗಿ ನಬಾರ್ಡ್ ವತಿಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಎಚ್.ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಶ್ರೀಕೃಷ್ಣ ಹಿಟ್ಟಿನ ಗಿರಣಿಯ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ದತ್ತರಾಜ್, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ.ಕೆ.ಪಿ.ಆರ್.ಪ್ರಸನ್ನ, ಸಹ ಪ್ರಾಧ್ಯಾಪಕರಾದ ಡಾ.ಬನು ದೇಶಪಾಂಡೆ, ಬಿ.ಎಸ್.ಲಿಂಗಪ್ಪ, ಡಾ.ಎಂ.ಎಲ್.ರೇವಣ್ಣ, ಪೂರ್ಣ ಬಳಕೆಯಾಗಿರದ ಬೆಳೆಗಳ ವಿಭಾಗದ ಪ್ರಾಧ್ಯಾಪಕ ಡಾ.ನಿರಂಜನಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.