ADVERTISEMENT

‘ಬೆಂಗಳೂರು 20’ ಯೋಜನೆಗೆ ಚಾಲನೆ

ಸ್ವಚ್ಛ ಭಾರತ ರ‍್ಯಾಂಕಿಂಗ್‌ನಲ್ಲಿ ಮಹಾನಗರದ ಸ್ಥಾನ ಉತ್ತಮಗೊಳಿಸಲು ಯತ್ನ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 19:16 IST
Last Updated 7 ಜೂನ್ 2019, 19:16 IST
ಸಭೆಯಲ್ಲಿ ಪಾಲಿಕೆ ಸದಸ್ಯ ಬಿ.ಎಸ್‌. ಸತ್ಯನಾರಾಯಣ ಮಾತನಾಡಿದರು. ಮೇಯರ್‌ ಗಂಗಾಂಬಿಕೆ, ಬಿಬಿಎಂಪಿ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು –ಪ್ರಜಾವಾಣಿ ಚಿತ್ರ
ಸಭೆಯಲ್ಲಿ ಪಾಲಿಕೆ ಸದಸ್ಯ ಬಿ.ಎಸ್‌. ಸತ್ಯನಾರಾಯಣ ಮಾತನಾಡಿದರು. ಮೇಯರ್‌ ಗಂಗಾಂಬಿಕೆ, ಬಿಬಿಎಂಪಿ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಸ್ವಚ್ಛ ಭಾರತ ರ‍್ಯಾಂಕಿಂಗ್‌ನಲ್ಲಿ ಬೆಂಗಳೂರಿನ ಸ್ಥಾನವನ್ನು 20ರೊಳಗೆ ತರುವ ಉದ್ದೇಶದಿಂದ ‘ಬೆಂಗಳೂರು 20’ ಯೋಜನೆ ಜಾರಿಗೊಳಿಸಲಾಗಿದೆ ಎಂದು ಮೇಯರ್‌ ಗಂಗಾಂಬಿಕೆ ಘೋಷಿಸಿದರು.

ಯೋಜನೆಯ ಕುರಿತಂತೆ 198 ವಾರ್ಡ್‌ಗಳ‍ಪಾಲಿಕೆ ಸದಸ್ಯರು, ಅಧಿಕಾರಿಗಳು ಮತ್ತು ವಿವಿಧ ಸರ್ಕಾರೇತರ ಸಂಸ್ಥೆಗಳ ಸದಸ್ಯರ ಜೊತೆ ಶುಕ್ರವಾರ ಮೊದಲ ಸಭೆ ನಡೆಸಿದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತ್ಯಾಜ್ಯ, ಘನ ತ್ಯಾಜ್ಯ ವಿಲೇವಾರಿ ಮತ್ತು ಶೌಚಾಲಯಗಳ ಬಳಕೆಯಲ್ಲಿ ಕಳಪೆ ನಿರ್ವಹಣೆ ತೋರಿದ್ದರಿಂದ ಬೆಂಗಳೂರು ಸ್ವಚ್ಛ ಭಾರತ ಪಟ್ಟಿಯಲ್ಲಿ 194ನೇ ಸ್ಥಾನದಲ್ಲಿದೆ. ನಗರದಲ್ಲಿ ಇನ್ನೂ ಕನಿಷ್ಠ 30 ಸಾವಿರ ಶೌಚಾಲಯಗಳ ಅಗತ್ಯವಿದೆ. ಆದರೆ, ನಗರದಲ್ಲಿ ಇರುವುದು ನೂರಾರು ಶೌಚಾಲಯ
ಗಳು ಮಾತ್ರ. ಹಾಗಾಗಿ, ಹೊಸ ಶೌಚಾಲಯಗಳನ್ನು ನಿರ್ಮಿಸಬೇಕು ಮತ್ತು ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು’ ಎಂದು ಹೇಳಿದರು.

‘ಈ ಯೋಜನೆ ಅಥವಾ ಅಭಿಯಾನದಲ್ಲಿ ನಾಗರಿಕರನ್ನೂ ಒಳಗೊಳ್ಳುವಂತೆ ಮಾಡುವುದು ಮತ್ತು ಅವರನ್ನು ನಗರದ ಪ್ರಚಾರ ರಾಯಭಾರಿಗಳನ್ನಾಗಿ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು’ ಎಂದು ಹೇಳಿದರು.

ADVERTISEMENT

‘ನಗರದಲ್ಲಿ ಒಣ ಕಸ ಸಂಗ್ರಹ ಕೇಂದ್ರಗಳು ಮತ್ತು ಎಂಟು ಸಂಸ್ಕರಣ ಘಟಕಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಕೂಡ ಬೇರೆ ನಗರಗಳಿಗಿಂತ ರ‍್ಯಾಂಕಿಂಗ್‌ನಲ್ಲಿ ಹಿಂದೆ ಬಿದ್ದಿರುವುದಕ್ಕೆ ಬೇಸರವಿದೆ’ ಎಂದರು.

‘ಪ್ರಮುಖವಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸದೇ ಇರುವುದು ಕೂಡ ಕಡಿಮೆ ರ‍್ಯಾಂಕ್‌ ಬರಲು ಕಾರಣ. ನಾವು ನಗರದ ಮಾಲೀಕರು ಮತ್ತು ಈ ನಗರ ನಮ್ಮ ಹೆಮ್ಮೆ ಎಂಬ ಅರಿವನ್ನು ನಾಗರಿಕರಲ್ಲಿ ಮೂಡಿಸುವ ಅನಿವಾರ್ಯತೆ ಇದೆ’ ಎಂದರು.

‘ಪಾಲಿಕೆ ಸದಸ್ಯರು ಮತ್ತು ಎಂಜಿನಿಯರ್‌ಗಳ ನಡುವೆ ಸಹಕಾರ ಮತ್ತು ಸಮನ್ವಯದ ಕೊರತೆ ಇದೆ. ಇದನ್ನು ಸರಿ ಮಾಡುವ ಅವಶ್ಯಕತೆ ಇದೆ. ವಾರ್ಡ್‌ ಮಟ್ಟದಲ್ಲಿ ಪಾಲಿಕೆ ಸದಸ್ಯರು ಮತ್ತು ನಾಗರಿಕರೊಂದಿಗೆ ಸಭೆ ನಡೆಸಿ, ಅಲ್ಲಿನ ಸಮಸ್ಯೆಗಳ ಕುರಿತು ಚರ್ಚಿಸಲಾಗುವುದು’ ಎಂದರು.

‘ಈಗಾಗಲೇ ನಿರ್ಮಿಸಲಾಗಿರುವ ಶೌಚಾಲಯಗಳ ನಿರ್ವಹಣೆ ಹೇಗಿದೆ ಎಂಬುದನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಸಮರ್ಪಕವಾಗಿ ನಿರ್ವಹಣೆ ಮಾಡಿರದಿದ್ದರೆ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.