ADVERTISEMENT

ಬೇಕಾಬಿಟ್ಟಿ ಟ್ಯಾಂಕರ್ ನೀರು ಪೂರೈಕೆಗೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 4 ಮೇ 2012, 19:25 IST
Last Updated 4 ಮೇ 2012, 19:25 IST

ಬೆಂಗಳೂರು: ಟ್ಯಾಂಕರ್‌ಗಳಲ್ಲಿ ಇನ್ನು ಮುಂದೆ ಬೇಕಾಬಿಟ್ಟಿಯಾಗಿ ಕುಡಿಯುವ ನೀರು ಸರಬರಾಜು ಮಾಡುವಂತಿಲ್ಲ. ಅದಕ್ಕೆ ಕಡಿವಾಣ ಹಾಕಲು ಸರ್ಕಾರ ಸಿದ್ಧತೆ ನಡೆಸಿದೆ.

ನೀರು ಸರಬರಾಜುದಾರರು ಕಡ್ಡಾಯವಾಗಿ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ಪಡೆದಿರಬೇಕು. ಎಲ್ಲಿಂದ ಹಾಗೂ ಯಾವ ಕೊಳವೆಬಾವಿಯ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂಬುದನ್ನೂ ಸ್ಪಷ್ಟವಾಗಿ ಪರವಾನಗಿಯಲ್ಲಿ ಉಲ್ಲೇಖಿಸಿರಬೇಕು ಎಂಬ ನಿಯಮವನ್ನು ಜಾರಿ ಮಾಡಲಾಗುವುದು ಎಂದು ಬೆಂಗಳೂರು ಜಲಮಂಡಳಿ ಸಚಿವ ಎಸ್.ಸುರೇಶಕುಮಾರ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವಾರು ಕಡೆ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಆಗುತ್ತಿದೆ. ಆದರೆ, ಆ ನೀರಿನ ಗುಣಮಟ್ಟದ ಬಗ್ಗೆ ಯಾರಿಗೂ ಖಾತರಿ ಇಲ್ಲ. ಈ ಸಲುವಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳು ನೀರು ಪರೀಕ್ಷಾ ಕೇಂದ್ರಗಳನ್ನು ಹೊಂದಿವೆ. ಕೊಳವೆಬಾವಿ ಮಾಲೀಕರು ಅಲ್ಲಿ ನೀರನ್ನು ತಪಾಸಣೆಗೆ ಒಳಪಡಿಸಬೇಕು. ಕುಡಿಯಲು ನೀರು ಯೋಗ್ಯವಾಗಿದೆ ಎಂದು ಆ ಕೇಂದ್ರಗಳು ಪ್ರಮಾಣಪತ್ರ ನೀಡಿದರೆ ಮಾತ್ರ ಆ ನೀರನ್ನು ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡಬಹುದು ಎಂದರು.

ಟ್ಯಾಂಕರ್‌ನಲ್ಲಿ ಎಷ್ಟು ಲೀಟರ್ ನೀರಿದೆ? ಅದರ ದರ ಎಷ್ಟು ಎಂಬುದನ್ನು ಟ್ಯಾಂಕರ್ ಮೇಲೆ ಸ್ಪಷ್ಟವಾಗಿ ನಮೂದಿಸಬೇಕು ಎಂದು ನಿಯಮ ರೂಪಿಸಲಾಗುವುದು. ಇಷ್ಟೇ ದರಕ್ಕೆ ಮಾರಾಟ ಮಾಡಿ ಎಂದು ಸರ್ಕಾರ ಹೇಳುವುದಿಲ್ಲ. ದರ ಜನರಿಗೆ ಗೊತ್ತಾಗಲಿ ಎನ್ನುವ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ಪ್ರಾಧಿಕಾರದ ಸಭೆ: ಅಂತರ್ಜಲ ದುರ್ಬಳಕೆ ತಡೆ ಸಲುವಾಗಿ ಸರ್ಕಾರ ಪ್ರಾಧಿಕಾರವನ್ನು ರಚನೆ ಮಾಡಿದೆ. ಅದರ ಮೊದಲ ಸಭೆ ಶನಿವಾರ ನಡೆಯಲಿದೆ. ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ. ಇತರ 11 ಮಂದಿ ಸದಸ್ಯರಿರುತ್ತಾರೆ. ಇವರಲ್ಲದೆ, ನಾಲ್ಕು ಮಂದಿಯನ್ನು ನಾಮಕರಣ ಮಾಡಲು ಅವಕಾಶ ಇದೆ. ಸದ್ಯಕ್ಕೆ 11 ಮಂದಿ ಸಭೆ ಸೇರಿ ನಿಯಮಗಳನ್ನು ರೂಪಿಸಲಿದ್ದಾರೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.