ADVERTISEMENT

ಬೇಕಾಬಿಟ್ಟಿ ವರ್ಗಾವಣೆ ನಿಲ್ಲಿಸಿ: ಭಾರದ್ವಾಜ್‌

ರಾಷ್ಟ್ರೀಯ ಸಮಾವೇಶದಲ್ಲಿ ಸರ್ಕಾರದ ವಿರುದ್ಧ ರಾಜ್ಯಪಾಲರ ಗುಡುಗು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 20:03 IST
Last Updated 12 ಡಿಸೆಂಬರ್ 2013, 20:03 IST

ಬೆಂಗಳೂರು: ‘ಸರ್ಕಾರವು ಪೊಲೀಸ್‌ ಇಲಾಖೆಯಲ್ಲಿನ ಪ್ರಾಮಾಣಿಕ ಅಧಿ ಕಾರಿ­ಗಳನ್ನು ತನ್ನ ಮನಸ್ಸಿಗೆ ಬಂದಂತೆ ಬೇಕಾಬಿಟ್ಟಿ ವರ್ಗಾವಣೆ ಮಾಡುತ್ತಿದೆ. ಈ ಪರಿಪಾಠಕ್ಕೆ ಅಂತ್ಯ  ಹಾಡಬೇಕಿದೆ’ ಎಂದು ರಾಜ್ಯಪಾಲ ಎಚ್‌.ಆರ್‌.­ಭಾರದ್ವಾಜ್‌  ಸರ್ಕಾರದ ಕ್ರಮದ ಬಗೆಗೆ ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಪೊಲೀಸ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ‘ಅರ್ಥ್‌ ಸೆಕ್ಯುರ್‌’ ಮತ್ತಿತರ ಸಂಸ್ಥೆಗಳ ಸಹಯೋಗದಲ್ಲಿ ನಗರದ ಸೆಂಟ್ರಲ್‌ ಕಾಲೇಜಿನಲ್ಲಿ ಗುರುವಾರ ನಡೆದ ‘ಸ್ವತಂತ್ರ ಭಾರತದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆ’ ಕುರಿತು ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಪೊಲೀಸ್‌ ಇಲಾಖೆಯಲ್ಲಿಯೇ  ಅಧಿಕ ಸಂಖ್ಯೆಯಲ್ಲಿ ಭ್ರಷ್ಟ ಅಧಿಕಾರಿ ಗಳಿದ್ದಾರೆ. ಇಡೀ ಸಮಾಜಕ್ಕೆ ಸುರಕ್ಷತೆ  ಒದಗಿಸಬೇಕಾದ ಪೊಲೀಸ್‌ ಇಲಾಖೆ­ಯಲ್ಲಿ ಪ್ರಾಮಾಣಿಕ ಅಧಿಕಾರಿಗಳ ಸಂಖ್ಯೆ ಕಡಿಮೆಯಾಗಿದೆ’ ಎಂದು ಚಾಟಿ ಬೀಸಿದರು.

ಪೊಲೀಸ್‌ ಮಹಿಳಾ ಸಿಬ್ಬಂದಿ ನೇಮಿಸಿ: ‘ರಾಜ್ಯ ಸೇರಿದಂತೆ ಎಲ್ಲೆಡೆ ಮಹಿಳಾ ದೌರ್ಜನ್ಯ ಹೆಚ್ಚುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಪೊಲೀಸ್‌ ಇಲಾಖೆಯಲ್ಲಿ ಹೆಚ್ಚಿನ ಮಹಿಳಾ ಸಿಬ್ಬಂದಿ ನೇಮಕ ಮಾಡ ಬೇಕು. ಪ್ರತಿ ಠಾಣೆಯಲ್ಲಿಯೂ ಹೆಚ್ಚಿನ ಮಹಿಳಾ ಸಿಬ್ಬಂದಿ ಇರುವಂತೆ ಮಾಡ ಬೇಕು’ ಎಂದು ಸಲಹೆ ನೀಡಿದರು.

ವಿಶೇಷವಾದ ಕಾನೂನು: ‘ಮಹಿಳಾ ದೌರ್ಜನ್ಯ ತಡೆಗೆ ದೇಶದಲ್ಲಿ ಏಕ ರೀತಿ ಕಾನೂನು ರಚನೆಯಾಗ ಬೇಕು. ಇದರ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸ ಬೇಕು. ಮಹಿಳಾ ನ್ಯಾಯಾಧೀಶರು ಮತ್ತು ವಕೀಲರ ಸಂಖ್ಯೆಯೂ ಹೆಚ್ಚ ಬೇಕು’ ಎಂದು ಪ್ರತಿಪಾದಿಸಿದರು.

‘ಮಹಿಳಾ ದೌರ್ಜನ್ಯ ಪ್ರಕರಣಗಳ ಶೀಘ್ರ ವಿಲೇವಾರಿಗೆ ವಿಶೇಷ ನ್ಯಾಯಾ ಲಯದ ಸ್ಥಾಪನೆಯಾಗಬೇಕು. ಇಂತಹ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಬೇಕು’ ಎಂದರು.

ಗೃಹ ಸಚಿವ ಕೆ.ಜೆ.ಜಾರ್ಜ್‌ ಮಾತ ನಾಡಿ, ‘ಮಹಿಳಾ ದೌರ್ಜನ್ಯ ಪ್ರಕರಣ ಗಳ ಶೀಘ್ರ ಇತ್ಯರ್ಥಕ್ಕೆ ಹತ್ತು ತ್ವರಿತಗತಿ ನ್ಯಾಯಾಲಯಗಳ ಸ್ಥಾಪನೆಗೆ ಸರ್ಕಾರ ಚಿಂತನೆ ನಡೆಸಿದೆ’ ಎಂದರು.

‘ಮಹಿಳೆಯರ ಮೇಲೆ ಇತ್ತೀಚೆಗೆ ನಡೆದ ಪ್ರಕರಣಗಳಿಂದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಸಂವಿಧಾನದ ಆಶಯಗಳನ್ನು ಅನು ಷ್ಠಾನಕ್ಕೆ ತರಲು ವಿಫಲವಾಗಿದ್ದೇವೆ’ ಎಂದು ವಿಷಾದಿಸಿದರು.

‘ಪೊಲೀಸ್‌ ಇಲಾಖೆಯು  ಪ್ರತಿ ಯೊಬ್ಬ ಮಹಿಳೆಗೆ ಭದ್ರತೆ ಒದಗಿಸಲು ಬದ್ಧವಾಗಿದೆ’ ಎಂದರು.

ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶೋಭಾ ಓಜಾ, ‘ಮಹಿಳೆ ಯರು ಇಂದು ತಮ್ಮ ಸುರಕ್ಷತೆ, ಭದ್ರತೆ ಗಾಗಿ ಬೀದಿಯಲ್ಲಿ ನಿಂತು ಹೋರಾಟ ನಡೆಸಬೇಕಾಗಿದೆ’ ಎಂದರು.

‘ಮಹಿಳಾ ಸುರಕ್ಷತೆ ಪೊಲೀಸ್‌ ಇಲಾಖೆ ಅಥವಾ ಕಾನೂನಿನಿಂದ ಮಾತ್ರ ಸಾಧ್ಯವಿಲ್ಲ. ಪುರುಷರ ಚಿಂತನಾ ವಿಧಾನ ಬದಲಾಗಬೇಕು. ಮಹಿಳೆ ಯರೂ ಪುರುಷರಂತೆ ಸಮಾನರು ಎಂಬುದನ್ನು ಮನಗಾಣಬೇಕು’ಎಂದರು.

ಪ್ರತಿಕ್ರಿಯೆಗೆ ಸಿ.ಎಂ ನಕಾರ
ಬೆಂಗಳೂರು: ‘ರಾಜ್ಯಪಾಲರ ಹೇಳಿಕೆ ಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದ ರಾಮಯ್ಯ ಹೇಳಿದರು.

‘ಪೊಲೀಸ್‌ ಅಧಿಕಾರಿಗಳ ವರ್ಗಾ ವಣೆ ಕುರಿತಂತೆ ರಾಜ್ಯಪಾಲರೂ ಆಕ್ಷೇಪ ಎತ್ತಿದ್ದಾರಲ್ಲ’ ಎಂಬ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT