ಬೆಂಗಳೂರು: ನಗರದ ಮ್ಯೂಸಿಯಂ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ಬೈಕ್ ಡಿಕ್ಕಿ ಹೊಡೆದು ಪಾದಚಾರಿಯೊಬ್ಬರು ಸಾವನ್ನಪ್ಪಿದ್ದಾರೆ.ದೇವರಜೀವನಹಳ್ಳಿ ನಿವಾಸಿ ಭಾಸ್ಕರ್ (48) ಮೃತಪಟ್ಟವರು. ಬ್ರಿಗೇಡ್ ರಸ್ತೆ ಬಳಿಯ ಪೀಠೋಪಕರಣಗಳ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು ಅಂಗಡಿಯಿಂದ ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಭಾಸ್ಕರ್ ಅವರು ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಂತರ ಬೈಕ್ ಸವಾರ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಅಶೋಕನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾಕರೆ.
ಮಹಿಳೆ ಅನುಮಾನಾಸ್ಪದ ಸಾವು: ಮಡಿವಾಳ ಬಳಿಯ ಮಂಗಮ್ಮನಪಾಳ್ಯದ ನಿವಾಸಿ ಸಿದ್ದಪ್ಪ ಎಂಬುವರ ಪತ್ನಿ ಶೋಭಾ (25) ಅವರು ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಮುನೇಶ್ವರಲೇಔಟ್ನ ಖಾಲಿ ನಿವೇಶನದಲ್ಲಿ ಭಾನುವಾರ ಬೆಳಿಗ್ಗೆ ಅವರ ಶವ ಪತ್ತೆಯಾಗಿದೆ.
ಸಿದ್ಧ ಉಡುಪು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಶೋಭಾ, ನಾಲ್ಕು ವರ್ಷದ ಹಿಂದೆ ಸಿದ್ದಪ್ಪ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಎರಡು ವರ್ಷದ ಮಗುವಿದೆ. ಪತ್ನಿ ಕಾಣೆಯಾಗಿರುವ ಬಗ್ಗೆ ಸಿದ್ದಪ್ಪ ಮಡಿವಾಳ ಠಾಣೆಯಲ್ಲಿ ಡಿ.17ರಂದು ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತ್ಯೇಕ ಅಪಘಾತ: ಇಬ್ಬರ ಸಾವು
ಹೊಸಕೋಟೆ: ಹೊಸಕೋಟೆ ಬಳಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ವೃದ್ಧೆ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.ಚಿಂತಾಮಣಿ ರಸ್ತೆಯ ಬೀಮಕ್ಕನಹಳ್ಳಿ ಬಳಿ ಭಾನುವಾರ ಕಾರು ಮಗುಚಿ ಬಿದ್ದು ಬಾಲಕಿ ಸ್ಥಳದಲ್ಲೇ ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ. ಕಿರಣ್ಮಯಿ (10) ಮೃತಪಟ್ಟ ಬಾಲಕಿ.ಕಾರಿನ ಮುಂಭಾಗದ ಚಕ್ರವೊಂದು ಪಂಕ್ಚರ್ ಆದ ಕಾರಣ ಚಾಲಕನ ಹತೋಟಿ ತಪ್ಪಿ ಕಾರು ಮಗುಚಿ ಬಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ಲಕ್ಷ್ಮೀ, ರಂಜಿತಾ, ಚಾಲಕ ಮನೋಜ್ ಕುಮಾರ್ ಅವರನ್ನು ಇಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.