ಬೆಂಗಳೂರು: 'ಭಯೋತ್ಪಾದನೆಯಿಂದ ವಿಶ್ವದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಯುದ್ಧ ಭೀತಿ ಕಾಡುತ್ತಿದೆ' ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ 80ನೇ ವಾರ್ಷಿಕೋತ್ಸವದ ಅಂಗವಾಗಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಆಧುನಿಕ ಬಿಕ್ಕಟ್ಟುಗಳಿಗೆ ಪ್ರಾಚೀನ ಪರಿಹಾರ’ ರಾಷ್ಟ್ರೀಯ ಸಮಾವೇಶದಲ್ಲಿ ಅವರು ಮಾತನಾಡಿದರು.
'ಮತೀಯ ಭಾವನೆಯಿಂದ ಸಮಾಜದಲ್ಲಿ ಒಡಕು ಮೂಡಿಸಲಾಗುತ್ತಿದೆ. ಆದರೆ, ಜನರಿಗೆ ಬೇಕಿರುವುದು ಶಾಂತಿ. ಈ ನಿಟ್ಟಿನಲ್ಲಿ ಜ್ಞಾನ ನೀಡುವ ಕಾರ್ಯವನ್ನು ಬ್ರಹ್ಮ ಕುಮಾರಿ ಸಮಾಜ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಡುತ್ತಿರುವುದು ಶ್ಲಾಘನೀಯ' ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮೌಂಟ್ ಅಬುವಿನ ಬ್ರಹ್ಮ ಕುಮಾರಿ ಸಮಾಜದ ಹೆಚ್ಚುವರಿ ಕಾರ್ಯದರ್ಶಿ ಬೃಜ್ಮೋಹನ್, ‘ವೈಯಕ್ತಿಕ ಸಮಸ್ಯೆಗಳಿಗೆ, ಸಾಮಾಜಿಕ ಹಾಗೂ ವಿಶ್ವದ ಸಮಸ್ಯೆಗಳಿಗೆ ಭಗವದ್ಗೀತೆಯಲ್ಲಿ ಪರಿಹಾರಗಳಿವೆ. ನಿಸ್ವಾರ್ಥವಾಗಿ ಭಗವಂತನನ್ನು ನೆನೆದಾಗ ಎಲ್ಲಾ ಸಮಸ್ಯೆಗಳು ಬಗೆಹರಿದು ಮಾನವನ ಕೆಟ್ಟ ಪ್ರವೃತ್ತಿಗಳು ನಾಶವಾಗುತ್ತವೆ’ ಎಂದು ಅವರು ಕಿವಿ ಮಾತು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.