ಬೆಂಗಳೂರು: ಹೆಸರಘಟ್ಟ ಹೋಬಳಿ ತರಬನಹಳ್ಳಿಯಲ್ಲಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮತಯಾಚನೆ ವೇಳೆ ಇಲ್ಲಿನ ಸರ್ಕಾರಿ ನೌಕರನನ್ನು ಕಂಡು ಗ್ರಾಮಸ್ಥರು ಕಕ್ಕಾಬಿಕ್ಕಿಯಾದರು.
‘ಬಾಗಲಗುಂಟೆಯ ಜಲಮಂಡಳಿ ವಿಭಾಗದಲ್ಲಿ ಪಿಟ್ಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ಮಲ್ಲಯ್ಯ ಪ್ರಚಾರದ ವಾಹನ ಏರಿದರು. ವಿಶ್ವನಾಥ್ ಮೇಲೆ ಅವರಿಗೆ ಪ್ರೀತಿ, ಅಭಿಮಾನ ಇರಬಹುದು. ಆದರೆ, ಕೆಲಸ ಸಮಯದಲ್ಲಿ ಮತಯಾಚನೆಗೆ ಸಾಥ್ ನೀಡುವುದು ಕಾನೂನಿನ ಪ್ರಕಾರ ಅಪರಾಧ’ ಎಂದು ತರಬನಹಳ್ಳಿಯ ಮಹೇಶ್ ಹೇಳಿದರು.
‘ಸ್ಥಳದಲ್ಲಿ ಚುನಾವಣಾ ನೀತಿ ಸಂಹಿತೆ ಅಧಿಕಾರಿಗಳಾದ ನಾರಾಯಣ್ ಸ್ವಾಮಿ ಇದ್ದರೂ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಅಧಿಕಾರಿಗಳೇ ಹೀಗೆ ಕಾನೂನು ಉಲ್ಲಂಘಿಸಿದರೆ ಗತಿಯೇನು’ ಎಂದು ಪ್ರಶ್ನಿಸಿದರು.
ನಿವೃತ್ತ ಸರ್ಕಾರಿ ವಕೀಲ ಸೋಮಶೇಖರ್, ‘ಸರ್ಕಾರದ ಸಂಬಳ ತೆಗೆದುಕೊಳ್ಳುವ ನೌಕರ ಬಹಿರಂಗ ಮತಯಾಚನೆಯಲ್ಲಿ ಕಾಣಿಸಿಕೊಳ್ಳುವುದು ಕಾನೂನು ಬಾಹಿರವಾಗಿದ್ದು, ಶಿಕ್ಷಾರ್ಹರಾಗಿರುತ್ತಾರೆ. ಚುನಾವಣಾಧಿಕಾರಿ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.