ADVERTISEMENT

ಮಧ್ಯರಾತ್ರಿವರೆಗೂ ದಾಖಲಾತಿ ಪರಿಶೀಲನೆ: ಪ್ರಾಧಿಕಾರದ ಮುಂದೆ ಕುಳಿತು ಬೇಸತ್ತ ವಿದ್ಯಾರ್ಥಿಗಳು, ಪೋಷಕರು

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 19:55 IST
Last Updated 17 ಜುಲೈ 2017, 19:55 IST
ದಾಖಲಾತಿ ಪರಿಶೀಲನೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಂದೆ ಕಾದು ಕುಳಿತ ವಿದ್ಯಾರ್ಥಿಗಳು, ಪೋಷಕರು	                 – ಪ್ರಜಾವಾಣಿ ಚಿತ್ರ
ದಾಖಲಾತಿ ಪರಿಶೀಲನೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಂದೆ ಕಾದು ಕುಳಿತ ವಿದ್ಯಾರ್ಥಿಗಳು, ಪೋಷಕರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಸೀಟಿಗಾಗಿ ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ ತ್ವರಿತ
ಗತಿಯಲ್ಲಿ ನಡೆಯದ ಕಾರಣ  ಅಭ್ಯರ್ಥಿಗಳು, ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿ ಮುಂಭಾಗ ಸೋಮವಾರ ಬೆಳಿಗ್ಗೆ 8 ರಿಂದಲೇ ವಿದ್ಯಾರ್ಥಿಗಳು, ಪೋಷಕರು ಜಮಾಯಿಸಿದ್ದರು. ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದ್ದರಿಂದಾಗಿ ದಾಖಲಾತಿ ಪರಿಶೀಲನೆ ಮಧ್ಯರಾತ್ರಿವರೆಗೂ ಮುಂದುವರಿದಿತ್ತು.

ಹೊರರಾಜ್ಯಗಳಿಂದ ಬಂದಿದ್ದ ವಿದ್ಯಾರ್ಥಿಗಳು ಪ್ರಾಧಿಕಾರದ ಆವರಣದೊಳಗೆ ನಿದ್ದೆಗೆ ಜಾರಿದ್ದರು. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್‌) ಮೆರಿಟ್‌ ಪಡೆದು ರಾಜ್ಯದ ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಎಲ್ಲ ವಿದ್ಯಾರ್ಥಿಗಳಿಗೂ ಪ್ರಾಧಿಕಾರದಿಂದಲೇ ದಾಖಲಾತಿ ಪರಿಶೀಲನೆ ಮಾಡಲಾಗುತ್ತಿದೆ.

ADVERTISEMENT

‘ನನ್ನ ಮಗಳು ನೀಟ್‌ನಲ್ಲಿ 2ರಿಂದ 2.05 ಲಕ್ಷ ಕ್ರಮಾಂಕದ ರ್‌್ಯಾಂಕ್‌ ಪಟ್ಟಿಯಲ್ಲಿದ್ದಾಳೆ. ಈ ರ್‌್ಯಾಂಕ್‌ನವರು ಸೋಮವಾರ ಮಧ್ಯಾಹ್ನ 2ರಿಂದ 4
ರೊಳಗೆ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕೆಂದು ತಿಳಿಸಲಾಗಿತ್ತು. ರಾತ್ರಿ 10 ಗಂಟೆಯಾದರೂ ಇನ್ನೂಕರೆದಿಲ್ಲ’ ಎಂದು ಪೋಷಕ ನಾಗರಾಜ್ ಮಾಹಿತಿ ನೀಡಿದರು.

‘ಮೊದಲು ಸೀಟು ಹಂಚಿಕೆ ಮಾಡಿ ಯಾವ ವಿದ್ಯಾರ್ಥಿಗಳಿಗೆ ಸೀಟು ಸಿಗುತ್ತದೋ ಅವರ ದಾಖಲಾತಿಗಳನ್ನಷ್ಟೇ ಪರಿಶೀಲಿಸಿದರೆ ಸಾಕು. ಅದು ಬಿಟ್ಟು ಮೆರಿಟ್‌ ಬಂದ ಎಲ್ಲ ಅಭ್ಯರ್ಥಿಗಳಿಗೂ ಅನಗತ್ಯವಾಗಿ ದಾಖಲಾತಿ ಪರಿಶೀಲನೆ ನಡೆಸಿ ಎಲ್ಲರಿಗೂ ತೊಂದರೆ ನೀಡಲಾಗುತ್ತಿದೆ’ ಎಂದು ಅನೇಕ ಪೋಷಕರು ಅಸಮಾಧಾನ ವ್ಯಕ್ತಪಡಿಸಿದರು.

‘ದಾಖಲಾತಿ ಪರಿಶೀಲನೆಗೆ ಹೆಚ್ಚಿನ ವಿದ್ಯಾರ್ಥಿಗಳು ಬೆಂಗಳೂರನ್ನೇ ಆಯ್ಕೆ ಮಾಡಿಕೊಂಡಿದ್ದರಿಂದ ಸ್ವಲ್ಪ ಮಟ್ಟಿನ ಸಮಸ್ಯೆಯಾಗಿದೆ. ನಿಗದಿತ ದಿನದೊಳಗೆ ದಾಖಲಾತಿ ಪರಿಶೀಲನೆ ಮುಗಿಸುವುದು ಅನಿವಾರ್ಯ. ಹೀಗಾಗಿ ಮಧ್ಯರಾತ್ರಿ ವರೆಗೂಮುಂದುವರಿಸಲಾಗಿದೆ’ ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.