ಬೆಂಗಳೂರು: ಬಿಬಿಎಂಪಿ ವತಿಯಿಂದ ಕೈಗೊಳ್ಳಲಾಗಿದ್ದ ಮೋರಿ ನಿರ್ಮಾಣ ಕಾಮಗಾರಿಗಾಗಿ ಗುಂಡಿ ತೆಗೆಯುತ್ತಿದ್ದ ಕೂಲಿ ಕಾರ್ಮಿಕನ ಮೇಲೆ ಮನೆಯೊಂದರ ಕಾಂಪೌಂಡ್ ಕುಸಿದು ಬಿದ್ದ ಪರಿಣಾಮ ಆತ ಸಾವನ್ನಪ್ಪಿದ ಘಟನೆ ಮೂಡಲಪಾಳ್ಯ ಸಮೀಪದ ಕಲ್ಯಾಣನಗರದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಕೊಪ್ಪಳ ಜಿಲ್ಲೆಯ ಸಿಂಗನಾಳ ಗ್ರಾಮದ ನಿವಾಸಿ ವೀರೇಶ್ (30) ಮೃತಪಟ್ಟವರು. ವಾರದ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದ ಅವರು ಪಾಪರೆಡ್ಡಿಪಾಳ್ಯದಲ್ಲಿ ನೆಲೆಸಿದ್ದರು ಎಂದು ಚಂದ್ರಾಲೇಔಟ್ ಪೊಲೀಸರು ತಿಳಿಸಿದ್ದಾರೆ.
ಕಲ್ಯಾಣನಗರ ಎರಡನೇ ಅಡ್ಡರಸ್ತೆಯಲ್ಲಿ ಹೊಸ ಮೋರಿ ನಿರ್ಮಾಣಕ್ಕಾಗಿ ವೀರೇಶ್ ಎಂಬ ಕಾರ್ಮಿಕ ಗುಂಡಿ ತೋಡುತ್ತಿದ್ದರು. ಆಗ ಆ ಸ್ಥಳಕ್ಕೆ ಹೊಂದಿಕೊಂಡಂತೆಯೇ ಇರುವ ಮನೆಯೊಂದರ ಕಾಂಪೌಂಡ್ ಕುಸಿದು ವೀರೇಶ್ ಮೇಲೆ ಬಿದ್ದಿತು.
ಈ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಇತರೆ ಕೂಲಿ ಕಾರ್ಮಿಕರು ಕಾಂಪೌಂಡ್ನ ಅವಶೇಷಗಳನ್ನು ತೆರವುಗೊಳಿಸಿ ಅವರನ್ನು ರಕ್ಷಿಸುವ ವೇಳೆಗೆ ವೀರೇಶ್ ಸಾವನ್ನಪ್ಪಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ಸಂಬಂಧ ಕಾಮಗಾರಿ ಗುತ್ತಿಗೆದಾರ ಗಣೇಶ್ ಮತ್ತು ಮೇಸ್ತ್ರಿ ಮಲ್ಲೇಶ್ ಅವರ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.