ADVERTISEMENT

ಮಳೆ: ಪಾದಚಾರಿ ಮಾರ್ಗದಲ್ಲಿ ಉರುಳಿದ ಮರ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2018, 19:09 IST
Last Updated 22 ಏಪ್ರಿಲ್ 2018, 19:09 IST
ರೆಸಿಡೆನ್ಸಿ ರಸ್ತೆಯಲ್ಲಿ ಬೈಕ್ ಸವಾರಿಯ ಖುಷಿ
ರೆಸಿಡೆನ್ಸಿ ರಸ್ತೆಯಲ್ಲಿ ಬೈಕ್ ಸವಾರಿಯ ಖುಷಿ   

ಬೆಂಗಳೂರು: ಶಿವಾನಂದ ವೃತ್ತದ ಗುರುರಾಜ ಕಲ್ಯಾಣ ಮಂಟಪದ ಸಮೀಪ, ಜೀವನಬೀಮಾ ನಗರದಲ್ಲಿ ನೆಲಕ್ಕುರುಳಿದ ಮರಗಳು, ಹಡ್ಸನ್‌ ಚರ್ಚ್‌ ಬಳಿ ಪಾದಚಾರಿ ಮಾರ್ಗದ ಮೇಲೆ ಬಿದ್ದ ಮರದ ಕೊಂಬೆ. ರಸ್ತೆಯಲ್ಲೇ ನಿಂತ ನೀರು, ಸಂಚಾರ ದಟ್ಟಣೆ.

ಇವು ಭಾನುವಾರ ಸಂಜೆ ಸುರಿದ ಮಳೆಯಿಂದಾಗಿರುವ ಅವಾಂತರಗಳು.

ಮಲ್ಲೇಶ್ವರ, ಆರ್‌.ಟಿ. ನಗರ, ವಿಜಯ ನಗರ, ಮತ್ತೀಕೆರೆ, ಅಲಸೂರು, ಇಂದಿರಾ ನಗರ, ಮಹಾತ್ಮಗಾಂಧಿ ರಸ್ತೆ, ಜೀವನಬೀಮಾ ನಗರ, ದಾಸರಹಳ್ಳಿ, ಯಶವಂತಪುರ, ದೇವಯ್ಯಪಾರ್ಕ್‌, ಸಿ.ವಿ.ರಾಮನ್‌ ನಗರ, ಕಗ್ಗದಾಸಪುರ, ಎಚ್‌ಎಎಲ್‌, ಹೆಬ್ಬಾಳ, ನಾಗರಬಾವಿ, ಮೈಸೂರು ರಸ್ತೆ, ಕೊಟ್ಟಿಗೆಪಾಳ್ಯದಲ್ಲಿ ಮಳೆಯಾಗಿದೆ.

ADVERTISEMENT

ನಗರದಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ ಬಾನು ತುಂಬೆಲ್ಲ ಕವಿದ ಮೋಡಗಳು 4.30ರ ಸುಮಾರಿಗೆ ಹನಿಯಾಗಿ ಧರೆಗಿಳಿದವು.

ವರುಣ ಸಿಂಚನಕ್ಕೂ ಮುನ್ನ ಕೆಲವೇ ನಿಮಿಷಗಳ ಕಾಲ ಬೀಸಿದ ಗಾಳಿಯ ರಭಸಕ್ಕೆ ರಸ್ತೆಯ ಇಕ್ಕೆಲಗಳಲ್ಲಿದ್ದ ಬೃಹದಾಕಾರದ ಮರಗಳ ಓಲಾಟ ಎದೆ ಝಲ್‌ ಎನಿಸುವಂತಿತ್ತು. ಮಲ್ಲೇಶ್ವರ, ಮತ್ತೀಕೆರೆ, ಯಶವಂತಪುರದಲ್ಲಿ ವಾಯುವಿನ ಪ್ರಹಾರಕ್ಕೆ ತೆಂಗಿನ ಮರಗಳು ಒಂದೇ ಕಡೆ ಬಾಗಿ, ಬಿದ್ದೇ ಬಿಟ್ಟಿತು ಎನ್ನುವಂತೆ ಬಾಸವಾಗುತ್ತಿತ್ತು.

ರಸ್ತೆಯಲ್ಲಿ ನೀರು: ಅದೇರಾಗ ಅದೇ ಹಾಡು ಎಂಬಂತೆ, ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ನಗರದ ಕಸ್ತೂರಬಾ, ರೆಸಿಡೆನ್ಸಿ,ಎಸ್‌.ಜೆ.ಪಿ, ಗಾಲ್ಫ್‌ಕೋರ್ಟ್‌ ರಸ್ತೆಗಳಲ್ಲಿ ತೆಗ್ಗು ಬಿದ್ದಿದ್ದರಿಂದ ನೀರು ರಸ್ತೆಯಲ್ಲೇ ನಿಂತಿತು. ಇದರಿಂದಾಗಿ ಸುಗಮ ಸಂಚಾರಕ್ಕೂ ಅಡಚಣೆ ಉಂಟಾಯಿತು. ಮಳೆ ನಿಂತ ಮೇಲೆ ಸಂಚಾರ ಸರಾಗವಾಯಿತು.

ದೇಶದ ಪೂರ್ವಭಾಗದಲ್ಲಿ ಮೇಲ್ಮೈಸುಳಿಗಾಳಿಯಿಂದ ಉಂಟಾದ ಮೋಡಗಳು ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಮತ್ತು ರಾಜ್ಯದ ದಕ್ಷಿಣ ಒಳನಾಡು ಪ್ರದೇಶಗಳತ್ತ ಸಾಗಿಬರುತ್ತಿವೆ. ಇದರ ಪರಿಣಾಮ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.