ಬೆಂಗಳೂರು: `ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಲು ಸಾಧ್ಯ' ಎಂದು ಶಿಕ್ಷಣತಜ್ಞ ಡಾ.ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟರು.
ಕೃಷಿ ತಂತ್ರಜ್ಞರ ಸಂಸ್ಥೆಯು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 44ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಪ್ರಸ್ತುತ ದಿನಗಳಲ್ಲಿ ಮೌಲ್ಯಗಳು ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ಆದರೆ ಎಲ್ಲ ಕಾಲಘಟ್ಟದಲ್ಲೂ ಇಂತಹದ್ದೊಂದು ಆತಂಕವಿತ್ತು. ಹಿರಿಯರು ಕೇವಲ ಮೌಲ್ಯಗಳ ಬಗ್ಗೆ ಭಾಷಣ ಬಿಗಿಯದೇ ಅದನ್ನು ಸ್ವತಃ ಅಳವಡಿಸಿಕೊಳ್ಳುವತ್ತ ಚಿಂತನೆ ನಡೆಸಬೇಕು' ಎಂದರು.
`ಪ್ರಾಮಾಣಿಕರಾಗಿ ಜೀವನ ನಡೆಸಿದಾಗ ಮಾತ್ರ ಜೀವನದ ಅಂತಃಸತ್ವವನ್ನು ಹೆಚ್ಚಿಸಬಹುದು. ಈ ದಿಸೆಯಲ್ಲಿ ಓದು ಮತ್ತು ಜ್ಞಾನವಿರಬೇಕು' ಎಂದು ಸಲಹೆ ನೀಡಿದರು.
ಹಿರಿಯ ಕೃಷಿ ತಂತ್ರಜ್ಞ ಗುರುರಾಜ ಹುಣಸಗಿ, `ಕೃಷಿಕರು ಅತ್ಯುನ್ನತ ತಂತ್ರಜ್ಞಾನವನ್ನು ಬಳಸಿಕೊಂಡು ಹೆಚ್ಚಿನ ಇಳುವರಿಯನ್ನು ಪಡೆಯಬಹುದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಕೃಷಿ ತಂತ್ರಜ್ಞರ ಸೇವೆಯನ್ನು ಪರಿಗಣಿಸಿ ಗೌರವ ನೀಡುತ್ತಿರುವುದಕ್ಕೆ ಸಂತಸವಾಗಿದೆ' ಎಂದು ಹೇಳಿದರು. ಕೃಷಿ ತಂತ್ರಜ್ಞರಿಗೆ ಸನ್ಮಾನ ಮಾಡಲಾಯಿತು. ಸಂಸ್ಥೆಯ ಡಾ.ಡಿ.ರಾಜಗೋಪಾಲ, ಕೆ.ಕೃಷ್ಣಪ್ಪ ಇತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.