ಬೆಂಗಳೂರು: ವಿಬ್ಗಯೊರ್ ಶಾಲಾ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ತರುವಾಯ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶಾಲಾ ವಾಹನದಲ್ಲಿ ಕಡ್ಡಾಯವಾಗಿ ಜಿಪಿಎಸ್ ವ್ಯವಸ್ಥೆ, ಸಿ.ಸಿ ಕ್ಯಾಮೆರಾ ಅಳವಡಿಸಬೇಕು ಎಂದು ನಗರ ಪೊಲೀಸರು ಹೊರಡಿಸಿರುವ ಮಾರ್ಗಸೂಚಿಗಳು ಇದೀಗ ಖಾಸಗಿ ವಾಹನಗಳ ಮಾಲೀಕರಲ್ಲಿ ಗೊಂದಲ ಮೂಡಿಸಿವೆ.
ಮಾರ್ಗಸೂಚಿಯಲ್ಲಿ ಸ್ಪಷ್ಟತೆ ಇಲ್ಲದ ಪರಿಣಾಮ ನಿತ್ಯ ಶಾಲಾ ಮಕ್ಕಳನ್ನು ಕರೆದೊಯ್ಯುವ ಸಾವಿರಾರು ಖಾಸಗಿ ವಾಹನಗಳ ಮಾಲೀಕರು ಇದು ತಮಗೆ ಅನ್ವಯಿಸುತ್ತದೆಯೇ, ಇಲ್ಲವೇ ಎಂಬ ಸಂದಿಗ್ಧತೆಗೆ ಸಿಲುಕಿದ್ದಾರೆ.
ಒಂದು ಅಂದಾಜಿನ ಪ್ರಕಾರ ನಗರದಲ್ಲಿ ಸುಮಾರು 15 ಸಾವಿರ ಖಾಸಗಿ ವಾಹನಗಳು ಶಾಲಾ ಮಕ್ಕಳನ್ನು ಹೊತ್ತೊಯ್ಯುತ್ತವೆ. ಇವು ಪಾಲಕರು ವೈಯಕ್ತಿಕವಾಗಿ ಬಾಡಿಗೆ ಆಧಾರದಲ್ಲಿ ನಿಯೋಜಿಸಿದ ವಾಹನಗಳಾಗಿವೆ.
ವಾಹನ ಸೌಲಭ್ಯವಿಲ್ಲದ ಶಾಲೆಯಲ್ಲಿ ಕಲಿಯುವ ಮಕ್ಕಳ ಪಾಲಕರು ಅನಿವಾರ್ಯವಾಗಿ ಈ ಖಾಸಗಿ ವಾಹನಗಳ ಮೊರೆ ಹೋಗಬೇಕಾಗಿದೆ. ಇದೀಗ, ಆಗಸ್ಟ್ 31ಕ್ಕೆ ಗಡುವು ನೀಡಿ ಪೊಲೀಸರು ಹೊರಡಿಸಿರುವ ಮಾರ್ಗಸೂಚಿಯನ್ವಯ ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳು ಕಡ್ಡಾಯವಾಗಿ ಜಿಪಿಎಸ್ ವ್ಯವಸ್ಥೆ, ಸಿ.ಸಿ ಕ್ಯಾಮೆರಾ ಅಳವಡಿಸಬೇಕು. ಜತೆಗೆ, ಚಾಲಕನ ಜತೆಗೆ ಪುರುಷ ಮತ್ತು ಮಹಿಳಾ ಸಿಬ್ಬಂದಿಯನ್ನು ನಿಯೋಜಿಸ ಬೇಕಾಗುತ್ತದೆ.
ನಿರ್ದಿಷ್ಟವಾಗಿ ಯಾವ ಯಾವ ವಾಹನಗಳಿಗೆಲ್ಲ ಈ ಮಾರ್ಗಸೂಚಿ ಅನ್ವಯಿಸುತ್ತದೆ ಎನ್ನುವುದನ್ನು ಪೊಲೀಸ್ ಇಲಾಖೆ ಸ್ಪಷ್ಟವಾಗಿ ಹೇಳಿಲ್ಲ. ಆದ್ದರಿಂದ, ಶಾಲೆಗಳಿಗೆ ಮಕ್ಕಳನ್ನು ಬಿಟ್ಟುಬರಲು ಬಾಡಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಖಾಸಗಿ ವಾಹನಗಳ ಮಾಲೀಕರಿಗೆ ಗೊಂದಲ ಮೂಡಿದೆ.
‘ಮಾರ್ಗಸೂಚಿಯು, ಸ್ವಂತ ಸಾರಿಗೆ ವ್ಯವಸ್ಥೆ ಹೊಂದಿದ ಶಾಲೆಯ ವಾಹನಗಳಿಗೆ ಮಾತ್ರವೋ ಅಥವಾ ನಮಗೂ ಕೂಡ ಅನ್ವಯಿಸುತ್ತದೆಯೋ ಎನ್ನುವುದು ಈವರೆಗೆ ಸ್ಪಷ್ಟವಾಗಿಲ್ಲ. ಒಂದೊಮ್ಮೆ ಇದು ನಮಗೂ ಅನ್ವಯ ಆಗುವುದಾದರೆ ನಾವು ಅದನ್ನು ಪಾಲಿಸಲು ಸಿದ್ಧರಿದ್ದೇವೆ. ಮೊದಲು ಈ ಕುರಿತು ಸ್ಪಷ್ಟತೆ ಮೂಡಲಿ’ ಎನ್ನುತ್ತಾರೆ ಅಖಿಲ ಕರ್ನಾಟಕ ಶಾಲಾ ಹಾಗೂ ಲಘು ವಾಹನ ಚಾಲಕರ ಸಂಘ ಅಧ್ಯಕ್ಷ ಪಿ.ಎಸ್. ಷಣ್ಮುಗಂ.
‘ಈ ವಾರದಲ್ಲಿ ಸಭೆ ಕರೆದಿದ್ದು, ಅದರಲ್ಲಿ ಮಾರ್ಗಸೂಚಿ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಒಂದೊಮ್ಮೆ ಪಾಲಕರು ಇದನ್ನು ಪಾಲಿಸಬೇಕೆಂದು ಒಮ್ಮತದ ಅಭಿಪ್ರಾಯ ವ್ಯಕ್ತಡಿಸಿದರೆ ಪಾಲಿಸುತ್ತೇವೆ’ ಎಂದರು. ಈ ಕುರಿತು ಮಾಹಿತಿ ಪಡೆ-ಯಲು ಪ್ರಯತ್ನಿಸಿದರೆ ಪೊಲೀಸ್ ಅಧಿಕಾರಿಗಳು ಸಂಪರ್ಕಕ್ಕೆ ಸಿಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.