ಬೆಂಗಳೂರು: `ಮಾಸ್ತಿ ಅವರನ್ನು ಕೇವಲ ಸಣ್ಣಕಥೆಗಳಿಗೆ ಮಾತ್ರ ಸೀಮಿತಗೊಳಿಸದೇ ಅವರ ಸಮಗ್ರ ಬರಹದ ಬಗೆಗೂ ಚರ್ಚೆಗಳಾಗಬೇಕು~ ಎಂದು ಹಿರಿಯ ಕವಿ ಡಾ.ದೊಡ್ಡರಂಗೇಗೌಡ ಅಭಿಪ್ರಾಯ ಪಟ್ಟರು.
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಕಾರ್ಯಾಲಯ ಟ್ರಸ್ಟ್ ನಗರದಲ್ಲಿ ಬುಧವಾರ ಆಯೋಜಿಸಿದ್ದ 13 ನೇ ವಾರ್ಷಿಕ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
`ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಎಲ್ಲಾ ಬಗೆಯ ಸೃಜನಶೀಲ ಸಾಹಿತ್ಯದ ರಚನೆ ಮಾಡಿದ್ದರೂ ಅವರನ್ನು ಕೇವಲ ಸಣ್ಣಕಥೆಗಳಿಗಷ್ಟೇ ಸೀಮಿತಗೊಳಿಸಲಾಗುತ್ತಿದೆ. ಕಾದಂಬರಿ, ನಾಟಕ, ಕಾವ್ಯದ ಕ್ಷೇತ್ರದಲ್ಲೂ ಮಾಸ್ತಿ ಅವರು ಉತ್ತಮವಾದ ಸಾಹಿತ್ಯ ಕೃಷಿ ಮಾಡಿದ್ದಾರೆ. ಅದರ ಬಗ್ಗೆಯೂ ಹೆಚ್ಚು ಚರ್ಚೆಗಳಾಗಬೇಕು. ಎಲ್ಲ ಕಾಲಮಾನದ ಜನರೂ ಮಾಸ್ತಿ ಅವರ ಕೃತಿಗಳನ್ನು ಓದಬೇಕು~ ಎಂದರು.
ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, `ಸೃಜನಶೀಲತೆ ಮುಖ್ಯವಾಗಿ ಸಾಮಾಜಿಕ ಜವಾಬ್ದಾರಿಯೂ ಹೌದು ಎಂಬ ಸತ್ಯವನ್ನು ಬರಹಗಾರರು ಅರಿಯಬೇಕು. ಮಾಸ್ತಿ ಅವರ ಕೃತಿಗಳು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಆಪ್ಯಾಯಮಾನವಾಗುವಂಥವು~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.