ಬೆಂಗಳೂರು: ರಾಜ್ಯದ ವಿವಿಧೆಡೆ ಎರಡು ವಾರಗಳಿಂದ ಸುರಿಯುತ್ತಿರುವ ಮುಂಗಾರು ಮಳೆಯಿಂದಾಗಿ ತರಕಾರಿ ದರಗಳು ಏರಿಳಿತ ಆಗಿವೆ.
ಬೆಂಗಳೂರು ಗ್ರಾಮಾಂತರ, ಕೋಲಾರ, ಮಂಡ್ಯ ಜಿಲ್ಲೆಗಳಲ್ಲಿ ಸುರಿದ ಮಳೆಗೆ ಟೊಮೆಟೊ ಗಿಡಗಳು ಹಲವೆಡೆ ಹಾಳಾಗಿವೆ. ಹಾಗಾಗಿ ಮಾರುಕಟ್ಟೆಗೆ ಹೆಚ್ಚು ಸರಬರಾಜು ಆಗುತ್ತಿಲ್ಲ. ಹಾಗಾಗಿ ಇದರ ದರ ಗಣನೀಯವಾಗಿ ಹೆಚ್ಚಿದೆ.
ಬೆಳೆ ಹಾನಿಯಿಂದಾಗಿ ಬಟಾಣಿ, ಬೀನ್ಸ್, ಎಲೆಕೋಸು, ಬೀಟ್ರೂಟ್, ಮೂಲಂಗಿ, ಹಸಿಮೆಣಸಿನಕಾಯಿ, ಬದನೆಕಾಯಿ, ಸೌತೆಕಾಯಿ ದರಗಳು ಹೆಚ್ಚಾಗಿವೆ.
ಹೊಸಕೋಟೆ, ನೆಲಮಂಗಲ, ಆನೇಕಲ್, ದೊಡ್ಡಬಳ್ಳಾಪುರ ಹಾಗೂ ರಾಮನಗರದಲ್ಲಿ ಬೆಳೆಯುವ ಗೋರಿಕಾಯಿ, ಹೂಕೋಸು, ಬೀನ್ಸ್, ಹಾಗಲಕಾಯಿ, ಆಲೂಗಡ್ಡೆ ಇಳುವರಿ ಉತ್ತಮವಾಗಿ ಬರುತ್ತಿದೆ. ಈ ತರಕಾರಿಗಳು ಮಾರುಕಟ್ಟೆಗೆ ಅಧಿಕಸರಬರಾಜು ಆಗುತ್ತಿರುವುದರಿಂದ ದರ ಸ್ವಲ್ಪ ಕಡಿಮೆ ಆಗಿವೆ.
ಹೀರೇಕಾಯಿ, ಬೆಂಡೆಕಾಯಿ, ಬದನೆಕಾಯಿ, ಕ್ಯಾಪ್ಸಿಕಮ್, ತೊಂಡೆ, ದರಗಳಲ್ಲಿ ಬದಲಾವಣೆ ಆಗಿಲ್ಲ.
‘ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದ ಈರುಳ್ಳಿ ದಾಸ್ತಾನು ನಗರದ ಎಪಿಎಂಸಿ ಮಾರುಕಟ್ಟೆಗೆ ಬರುತ್ತಿದೆ. ಹಾಗಾಗಿ ₹ 40 ಕ್ಕೆ ಮೂರು ಕೆ.ಜಿ. ಈರುಳ್ಳಿ ಮಾರುತ್ತಿದ್ದೇನೆ’ ಎಂದು ಕೆ.ಆರ್.ಮಾರುಕಟ್ಟೆಯ ವ್ಯಾಪಾರಿ ಮಹಮ್ಮದ್ ಅಬಾಜ್ ತಿಳಿಸಿದರು. ‘ಮಳೆಯಿಂದಾಗಿ ಸೊಪ್ಪುಗಳ ಇಳುವರಿ ಚೆನ್ನಾಗಿ ಬರುತ್ತಿವೆ ಎಂದು ವ್ಯಾಪಾರಿ ಶಾಂತಮ್ಮ ಹೇಳಿದರು.
**
ಮಳೆ ಚೆನ್ನಾಗಿ ಆಗಿರುವುದರಿಂದ ಅನೇಕ ರೈತರು ತರಕಾರಿ ಬೆಳೆಯುತ್ತಿದ್ದಾರೆ. ನಾಟಿ ಮಾಡಿದ ಸಸಿಗಳಲ್ಲಿ ಫಸಲು ಬಂದ ನಂತರವೇ ದರ ಗಣನೀಯವಾಗಿ ಇಳಿಯಲಿವೆ.
-ಆರ್.ಪ್ರಶಾಂತ್
ವ್ಯವಸ್ಥಾಪಕ, ಹಾಪ್ಕಾಮ್ಸ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.