ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಸೇರಿ ಸಚಿವ ಎಂ.ಬಿ. ಪಾಟೀಲ ಜಲ ಸಂಪನ್ಮೂಲ ಇಲಾಖೆಯಲ್ಲಿ ಯಾವ ರೀತಿ ಲೂಟಿ ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ಅವುಗಳಿಗೆ ಸಾಕಷ್ಟು ಪುರಾವೆಗಳೂ ಇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಎಸ್. ಪ್ರಕಾಶ್ ನೇತೃತ್ವದಲ್ಲಿ ಹಮ್ಮಿಕೊಂಡಿರುವ ‘ಬಿಜೆಪಿ ನಡಿಗೆ ಅಭಿವೃದ್ಧಿ ಕಡೆಗೆ’ ಪ್ರಚಾರ ಅಭಿಯಾನಕ್ಕೆ ಡಾಲರ್್ಸ ಕಾಲೊನಿಯಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಚಾಲನೆ ನೀಡಿ ಮಾತನಾಡಿದರು.
‘ಜಲ ಸಂಪನ್ಮೂಲ ಇಲಾಖೆಗೆ ಕುರಿತಂತೆ ನನ್ನ ವಿರುದ್ಧ ಮತ್ತೆ ಆರೋಪ ಮಾಡಿದರೆ ಯಡಿಯೂರಪ್ಪ ಅವರ ಬಣ್ಣ ಬಯಲು ಮಾಡುತ್ತೇನೆ’ ಎಂದು ಪಾಟೀಲ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು‘ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ ನಂತರ ನನ್ನ ವಿರುದ್ಧ ಏನು ಬೇಕಾದರೂ ಆರೋಪ ಮಾಡಲಿ. ಅದಕ್ಕೆ ಉತ್ತರ ನೀಡುತ್ತೇನೆ’ ಎಂದು ಗುಡುಗಿದರು.
‘ಕೇಂದ್ರ ಸರ್ಕಾರದ ಸಾಧನೆಗಳನ್ನು ಸಹಿಸಿಕೊಳ್ಳಲು ಕಾಂಗ್ರೆಸ್ ಪಕ್ಷದವರಿಗೆ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಪ್ರಧಾನಿ ಮೋದಿ ಅವರ ಪ್ರತಿ ಹೆಜ್ಜೆಯನ್ನು ಟೀಕಿಸುವ ಹೀನಾಯ ಸ್ಥಿತಿಗೆ ಆ ಪಕ್ಷ ತಲುಪಿದೆ’ ಎಂದೂ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.