ಬೆಂಗಳೂರು: `ಮುಖ್ಯ ನ್ಯಾಯಮೂರ್ತಿಗಳ ಆಡಳಿತ ವೈಫಲ್ಯದಿಂದ ರಾಜ್ಯದ ನ್ಯಾಯಾಂಗ ಶಿಥಿಲಗೊಂಡಿದೆ~ ಎಂದು ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಮುಖ್ಯ ನ್ಯಾಯಮೂರ್ತಿ ಅವರನ್ನು ಬೇರೆ ರಾಜ್ಯದ ಹೈಕೋರ್ಟ್ಗೆ ತಕ್ಷಣಕ್ಕೆ ವರ್ಗಾವಣೆ ಮಾಡಬೇಕು ಎಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಲಾಗಿದೆ~ ಎಂದರು. `ರಾಜ್ಯದಲ್ಲಿ ಸುಮಾರು 125 ಮುನ್ಸೀಪ್, 15 ಜಿಲ್ಲಾ ನ್ಯಾಯಾಧೀಶರು ಮತ್ತು 10 ನ್ಯಾಯಮೂರ್ತಿಗಳ ಕೊರತೆಯಿದೆ. ಆದರೆ, ಈ ಹುದ್ದೆಗಳನ್ನು ಭರ್ತಿ ಮಾಡುವ ಪ್ರಯತ್ನಗಳು ನಡೆಯುತ್ತಿಲ್ಲ~ ಎಂದು ಹೇಳಿದರು.
`ಮುಖ್ಯ ನ್ಯಾಯಮೂರ್ತಿಗಳು ಸುಮಾರು 200 ಪೊಲೀಸ್ ಪಡೆಯನ್ನು ಹೈಕೋರ್ಟಿನ ಆವರಣಕ್ಕೆ ಕರೆಸಿ ಕಲಾಪ ನಡೆಸಿರುವುದು ಇದೇ ಪ್ರಥಮ ಬಾರಿಯಾಗಿದೆ. ಈ ಹಿಂದೆಯೂ ವಕೀಲರ ಸಂಘದ ಮುಷ್ಕರ ಮತ್ತು ಕಾರ್ಯ ಕಲಾಪಗಳಿಂದ ಹೊರಗುಳಿಯುವಿಕೆಯನ್ನು ಅಂದಿನ ಅನೇಕ ನ್ಯಾಯಮೂರ್ತಿಗಳು ಎದುರಿಸಿದ್ದಾರೆ. ಆದರೆ, ಅವರ್ಯಾರು ಈ ರೀತಿ ನೂರಾರು-ಸಾವಿರಾರು ಪೊಲೀಸ್ ಪಡೆಗಳ ಸಹಾಯದಿಂದ ವಕೀಲರ ನ್ಯಾಯಯುತ ಬೇಡಿಕೆಗಳನ್ನು ಹತ್ತಿಕ್ಕುವ ಪ್ರಯತ್ನವನ್ನು ಮಾಡಿರಲಿಲ್ಲ~ ಎಂದು ಹೇಳಿದರು.
`ಮುಖ್ಯ ನ್ಯಾಯಮೂರ್ತಿಗಳು ತಮ್ಮ ಸಹೊದ್ಯೋಗಿ ನ್ಯಾಯಮೂರ್ತಿಗಳ ವಿಷಯ ಹಂಚಿಕೆಯನ್ನು ಎರಡು ತಿಂಗಳಿಗೊಮ್ಮೆ ಬದಲಾವಣೆ ಮಾಡಬೇಕು. ಆದರೆ, ಇದುವರೆಗೂ ಒಂದು ವರ್ಷವಾದರೂ ಹಲವು ನ್ಯಾಯಮೂರ್ತಿಗಳಿಗೆ ಅದೇ ವಿಷಯವನ್ನು ಮತ್ತು ಒಂದೇ ತರಹದ ಪ್ರಕರಣಗಳನ್ನು ನೀಡಲಾಗುತ್ತಿದೆ~ ಎಂದರು.
`ರಾಜ್ಯದ ನ್ಯಾಯಾಂಗದಲ್ಲಿ ಅತಿ ಮುಖ್ಯವಾಗಿ ಭ್ರಷ್ಟಾಚಾರದ ಆಪಾದನೆಗಳಿರುವ ಹಲವು ನ್ಯಾಯಾಧೀಶರನ್ನು ತನಿಖೆಗೆ ಒಳಪಡಿಸಿ ಅವರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಹಾಗಾಗಿ, ಈಗಿರುವ ರಿಜಿಸ್ಟ್ರಾರ್ ಜನರಲ್ ಮತ್ತು ಜಾಗ್ರತ ದಳದವರನ್ನು ಕೂಡಲೇ ವರ್ಗಾವಣೆ ಮಾಡಿ, ಸಮರ್ಥ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಬೇಕು~ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.