ADVERTISEMENT

ಮುಷ್ಕರ ನಡೆಸಲು ನಿರ್ಧರಿಸಿದ ನೌಕರರು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 19:24 IST
Last Updated 23 ಏಪ್ರಿಲ್ 2018, 19:24 IST

ಬೆಂಗಳೂರು: ಮುಷ್ಕರ ನಡೆಸಲು ಮುಂದಾಗಿದ್ದ ನೌಕರರನ್ನು ಸಮಾಧಾನ ಪಡಿಸಲು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ನಡೆಸಿದ ಸಂಧಾನ ಫಲ ನೀಡಿಲ್ಲ. ಬೇಡಿಕೆ ಈಡೇರಿಸಲು ಆಡಳಿತ ಮಂಡಳಿ ಒಪ್ಪಿಲ್ಲ. ಹಾಗಾಗಿ ಮುಷ್ಕರ ನಡೆಸುವುದು ಅನಿವಾರ್ಯ ಎಂದು ಬಿಎಂಆರ್‌ಸಿಎಲ್ ನೌಕರರ ಸಂಘ ತಿಳಿಸಿದೆ.

ಮಾರ್ಚ್‌ 22ರಿಂದ ‘ನಮ್ಮ ಮೆಟ್ರೊ’ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸುವುದಾಗಿ ಸಂಘವು ಮಾರ್ಚ್‌ 7ರಂದು ನಿಗಮಕ್ಕೆ ನೋಟಿಸ್‌ ನೀಡಿತ್ತು.

ಸಂಘದ ಪದಾಧಿಕಾರಿಗಳ ಜೊತೆ ಸಂಧಾನ ನಡೆಸುವ ಮೂಲಕ 30 ದಿನಗಳ ಒಳಗೆ ಸಮಸ್ಯೆ ಬಗೆಹರಿಸುವಂತೆ ಹೈಕೋರ್ಟ್‌ ಆದೇಶ ಮಾಡಿತ್ತು. ಬಳಿಕ ಸಂಘವು ಮುಷ್ಕರವನ್ನು ಮುಂದೂಡಿತ್ತು. ನಿಗಮದ ಆಡಳಿತ ಮಂಡಳಿಯ ಮೂವರು ಪ್ರತಿನಿಧಿಗಳು ಹಾಗೂ ಸಂಘದ ನಾಲ್ವರು ಪದಾಧಿಕಾರಿಗಳು ಅನೇಕ ಬಾರಿ ಸಭೆ ನಡೆಸಿದ್ದರು.

ADVERTISEMENT

‘ಸಂಧಾನ ಸಭೆಗಳಲ್ಲಿ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ. ಆದರೆ, ಸಂಘದ ಪ್ರಮುಖ ಬೇಡಿಕೆ ಈಡೇರಿಸುವ ಬಗ್ಗೆ ನಿಗಮದ ಪ್ರತಿನಿಧಿಗಳಿಂದ ಯಾವುದೇ ಖಚಿತ ಭರವಸೆ ಸಿಕ್ಕಿಲ್ಲ. ಈ ಸಭೆಗಳಲ್ಲಿ ಚರ್ಚೆಯಾದ ವಿಚಾರಗಳ ಬಗ್ಗೆ ನಿಗಮವು ಕೈಗೊಳ್ಳುವ ನಿರ್ಧಾರವನ್ನು ನೇರವಾಗಿ ಹೈಕೋರ್ಟ್‌ಗೆ ತಿಳಿಸುತ್ತೇವೆ ಎಂದು ಆಡಳಿತ ಮಂಡಳಿ ಪ್ರತಿನಿಧಿಗಳು ತಿಳಿಸಿದ್ದಾರೆ. ಆದರೆ, ಹೈಕೋರ್ಟ್‌ ಆ ರೀತಿ ಆದೇಶ ಮಾಡಿರಲಿಲ್ಲ’ ಎಂದು ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ವೇತನ ಪರಿಷ್ಕರಣೆ ಮಾಡಬೇಕು, ಬಿಎಂಆರ್‌ಸಿಎಲ್‌ ನೌಕರರ ಸಂಘಕ್ಕೆ ಮಾನ್ಯತೆ ನೀಡಬೇಕು ಎಂಬುದು ನೌಕರರ ಪ್ರಮುಖ ಬೇಡಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.