ADVERTISEMENT

ಮೂರು ಅಪಘಾತ: ನಾಲ್ವರ ಸಾವು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 19:30 IST
Last Updated 3 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ನಗರದ ಕೆ.ಆರ್. ಪುರ ಮತ್ತು ಆಡುಗೋಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮೂರು ಪ್ರತ್ಯೇಕ ಅಪಘಾತಗಳಲ್ಲಿ ಖಾಸಗಿ ಕಂಪೆನಿ ಉದ್ಯೋಗಿ ಸೇರಿದಂತೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.

ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಕೋರಮಂಗಲದಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ.

ಹನುಮಂತನಗರದಲ್ಲಿರುವ ಅಕ್ವಾ ಇನ್ಫೋಟೆಕ್ ಡಿಸೈನರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಗದೀಶ್ ಗೌತಮ್ (26) ಮೃತಪಟ್ಟವರು.

ಬಿಟಿಎಂ ಲೇಔಟ್‌ನಲ್ಲಿ ನೆಲೆಸಿದ್ದ ಅವರು ಬೆಳಗಿನ ಪಾಳಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ನಸುಕಿನ ನಾಲ್ಕು ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ವಾಟರ್ ಟ್ಯಾಂಕ್ ಜಂಕ್ಷನ್‌ನಲ್ಲಿ ಬಳಿ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪ್ರಗದೀಶ್ ಅವರು ನೆಲಕ್ಕೆ ಅಪ್ಪಳಿಸಿದಾಗ ಅವರ ತಲೆಗೆ ತೀವ್ರ ಪೆಟ್ಟಾಗಿ ಸಾವನ್ನಪ್ಪಿದ್ದಾರೆ. ಅವರ ಹೆಲ್ಮೆಟ್ ಚಿಂದಿಯಾಗಿದೆ. ತಮಿಳುನಾಡಿನ ಊಟಿಯವರಾದ ಪ್ರಗದೀಶ್ ಅವರು ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು  ಎಂದು ಪೊಲೀಸರು ತಿಳಿಸಿದ್ದಾರೆ.

ಲಾರಿ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಡುಗೋಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟ್ರಾಕ್ಟರ್ ಡಿಕ್ಕಿ: 2 ಸಾವು
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟ್ರಾಕ್ಟರ್ ಮಗಚಿ ಬಿದ್ದ ಪರಿಣಾಮ ಚಾಲಕ ಮತ್ತು ಪಕ್ಕದಲ್ಲಿ ಕುಳಿತಿದ್ದ ಯುವಕ ಇಬ್ಬರೂ ಮೃತಪಟ್ಟ ಘಟನೆ ರಾಮಮೂರ್ತಿನಗರ ಮುಖ್ಯ ರಸ್ತೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ವಿಜಿನಾಪುರದ ಮಲ್ಲ (20) ಮತ್ತು ದ್ಯಾವಣ್ಣ (24) ಮೃತಪಟ್ಟವರು.
 
ಬಳ್ಳಾರಿ ಜಿಲ್ಲೆಯವರಾದ ಅವರು ಕೂಲಿ ಕೆಲಸ ಮಾಡುತ್ತಿದ್ದರು. ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಅವರು ಕೆ.ಆರ್. ಪುರ ಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜಿಸಿ ವಾಪಸಾಗುತ್ತಿದ್ದರು. ಮಲ್ಲ ಟ್ರಾಕ್ಟರ್ ಚಾಲನೆ ಮಾಡುತ್ತಿದ್ದರು. ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದಾಗ ವಾಹನ ಕೆಳಗೆ ಸಿಲುಕಿದ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೊಂದು ಪ್ರಕರಣ: ಹಿಮ್ಮುಖವಾಗಿ ಚಲಿಸಿದ ಮಿನಿ ಲಾರಿ ಡಿಕ್ಕಿ ಹೊಡೆದು ಸೆಕ್ಯುರಿಟಿ ಗಾರ್ಡ್ ಸಾವನ್ನಪ್ಪಿರುವ ಘಟನೆ ಬೆನ್ನಿಗಾನಹಳ್ಳಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಬೆನ್ನಿಗಾನಹಳ್ಳಿಯ ನಿವಾಸಿಯಾಗಿದ್ದ ತಿಮ್ಮರೆಡ್ಡಿ (48) ಮೃತಪಟ್ಟವರು. ಅವರು ತಂಪು ಪಾನೀಯ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಂಪೆನಿ ಆವರಣಕ್ಕೆ ಬಂದಿದ್ದ ಲಾರಿ ಹಿಮ್ಮುಖವಾಗಿ ಚಲಿಸಿ ನಿಂತಿದ್ದ ತಿಮ್ಮರೆಡ್ಡಿ ಅವರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಎರಡೂ ಪ್ರಕರಣಗಳು ಕೆ.ಆರ್. ಪುರ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.