ADVERTISEMENT

ಮೆಟ್ರೊ: `ನಿಲ್ದಾಣ ಪ್ರವೇಶ ಯೋಜನೆ'ಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 19:59 IST
Last Updated 2 ಜುಲೈ 2013, 19:59 IST

ಬೆಂಗಳೂರು: ಮೆಟ್ರೊ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಹಾಗೂ ನಿಲ್ದಾಣಕ್ಕೆ ಬಂದು ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ ಸರ್ಕಾರ `ನಿಲ್ದಾಣ ಪ್ರವೇಶ ಯೋಜನೆ'ಯನ್ನು ಜಾರಿಗೆ ತರಲು ಮುಂದಾಗಿದೆ.

`ನಮ್ಮ ಮೆಟ್ರೊ' ಮೊದಲ ಹಂತದ ಬೈಯಪ್ಪನಹಳ್ಳಿ- ಎಂ.ಜಿ.ರಸ್ತೆ ಮಾರ್ಗ ಎರಡು ವರ್ಷಗಳ ಹಿಂದೆ ಆರಂಭವಾಗಿದೆ. ಈ ಅವಧಿಯಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಲಾಭ ಗಳಿಕೆ ಮಾತ್ರವಲ್ಲದೆ, ಮಾರ್ಗ ವಿಸ್ತರಿಸುವ ಬಗ್ಗೆಯೂ ಸಾಕಷ್ಟು ಪಾಠ ಕಲಿತಿದೆ. ಮೆಟ್ರೊ ಮೊದಲ ಹಂತದ ಯಶಸ್ಸಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು, ನಗರ ಸಾರಿಗೆ ಇಲಾಖೆ (ಡಿಯುಎಲ್‌ಟಿ) ಮೂಲಕ `ನಿಲ್ದಾಣ ಪ್ರವೇಶ ಯೋಜನೆ'ಯನ್ನು ಜಾರಿಗೆ ತರಲು ಮುಂದಾಗಿದೆ. 2006ರ ರಾಷ್ಟ್ರೀಯ ನಗರ ಸಾರಿಗೆ ನೀತಿಯ ಚೌಕಟ್ಟಿನಲ್ಲೇ ಡಿಯುಎಲ್‌ಟಿಯು ಈ ಯೋಜನೆಯನ್ನು ಸಿದ್ಧಪಡಿಸುತ್ತಿದೆ' ಎಂದು ಮೂಲಗಳು ತಿಳಿಸಿವೆ.

ಮೆಟ್ರೊ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ವಾಹನಗಳಿಗಿಂತ ಜನರ ಓಡಾಟ ಹೆಚ್ಚಿರಬೇಕು ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಉತ್ತೇಜನ ನೀಡಬೇಕೆಂಬುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈಗಾಗಲೇ ಹತ್ತು ಮೆಟ್ರೊ ನಿಲ್ದಾಣಗಳಲ್ಲಿ ಯೋಜನೆಯನ್ನು ಪ್ರಯೋಗಿಕವಾಗಿ ಜಾರಿಗೆ ತರಲು ನಗರ ಸಾರಿಗೆ ಇಲಾಖೆ ನಿರ್ಧರಿಸಿದೆ.

ಜಾಲಹಳ್ಳಿ ಮೆಟ್ರೊ ನಿಲ್ದಾಣ, ಪೀಣ್ಯ ಕೈಗಾರಿಕಾ ಪ್ರದೇಶ, ಪೀಣ್ಯ ಮೆಟ್ರೊ ನಿಲ್ದಾಣ, ಯಶವಂತಪುರ ಕೈಗಾರಿಕಾ ಪ್ರದೇಶ, ಯಶವಂತಪುರ, ಸಾಬೂನು ಕಾರ್ಖಾನೆ ನಿಲ್ದಾಣ, ಮಹಾಲಕ್ಷ್ಮಿ ಲೇಔಟ್ ಮೆಟ್ರೊ ನಿಲ್ದಾಣ, ರಾಜಾಜಿನಗರ, ಕುವೆಂಪು ರಸ್ತೆ ಮೆಟ್ರೊ ನಿಲ್ದಾಣ ಹಾಗೂ ಶ್ರೀರಾಂಪುರ ಮೆಟ್ರೊ ನಿಲ್ದಾಣಗಳ ಬಳಿ ಈ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದ್ದು, ನಗರ ಸಾರಿಗೆ ಇಲಾಖೆ ಟೆಂಡರ್ ಕರೆದಿದೆ. ಮೆಟ್ರೊ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಸಂಖ್ಯೆ ಹಾಗೂ ಸ್ಥಳಾವಕಾಶದ ಆಧಾರದ ಮೇಲೆ ಈ ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೆಟ್ರೊ ನಿಲ್ದಾಣಗಳ ಸುತ್ತಲ 750 ಮೀಟರ್ ವ್ಯಾಪ್ತಿಯನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗುವುದು. ಈ ಪೈಕಿ ಮೊದಲ 150 ಮೀಟರ್ ವಿಸ್ತೀರ್ಣವನ್ನು ಒಳಾಂಗಣ ಪ್ರದೇಶ (ಕೋರ್ ಏರಿಯಾ) ಹಾಗೂ ನಂತರದ ಪ್ರದೇಶವನ್ನು ಹೊರಾಂಗಣ ಪ್ರದೇಶ (ಬಫರ್ ಏರಿಯಾ) ಎಂದು ವಿಂಗಡಿಸಿ ಅಧ್ಯಯನ ನಡೆಸಲಾಗುವುದು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.