ಬೆಂಗಳೂರು: ಬೆಂಗಳೂರು ಪೂರ್ವ ತಾಲ್ಲೂಕಿನ (ಕೆ.ಆರ್.ಪುರ) ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಮಾಡುವಂತೆ ಆಗ್ರಹಿಸಿ ‘ರಾಜ್ಯ ಬಡವರ ಹಿತರಕ್ಷಣಾ ವೇದಿಕೆ’ ಕಾರ್ಯಕರ್ತರು ವಿಧಾನಸೌಧದ ಮುಂಭಾಗದ ರಸ್ತೆ ಬಳಿ ಮಂಗಳವಾರ ಮಧ್ಯಾಹ್ನ ಮೈಮೇಲೆ ಮಲ–ಮೂತ್ರ ಸುರಿದುಕೊಂಡು ಪ್ರತಿಭಟನೆ ನಡೆಸಿದರು.
‘ಪ್ರೆಸ್ಟೀಜ್ ಗ್ರೂಪ್, ಚೈತನ್ಯ ಸಮರ್ಪಣಾ ಸ್ಮರಣ ಹಾಗೂ ಪ್ರಾಜೆಕ್ಟ್ ಸಂಸ್ಥೆಗಳ ಬಿಲ್ಡರ್ಗಳು ಕೋಟ್ಯಂತರ ಮೌಲ್ಯದ ಭೂಮಿ ಒತ್ತುವರಿ ಮಾಡಿದ್ದಾರೆ. ಈ ಸಂಸ್ಥೆಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.
‘ಒತ್ತುವರಿ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ತಹಶೀಲ್ದಾರ್, ವೈಟ್ಫೀಲ್ಡ್ ಹಾಗೂ ಕಾಡುಗೋಡಿ ಕಂದಾಯ ನಿರೀಕ್ಷಕರು ಬಿಲ್ಡರ್ಗಳ ಜತೆ ಶಾಮೀಲಾಗಿದ್ದಾರೆ. ಕೂಡಲೇ ಅವರನ್ನು ಸೇವೆಯಿಂದ ವಜಾಗೊಳಿಸಬೇಕು’ ಎಂದು ಒತ್ತಾಯಿಸಿದರು. ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ ಕಾರಣಕ್ಕೆ ಪೊಲೀಸರು ಅವರನ್ನು ವಶಕ್ಕೆ ಪಡೆದರು.
***
ವೈಟ್ಫೀಲ್ಡ್ನಲ್ಲಿ ಕೆಲವು ತಿಂಗಳ ಹಿಂದೆ ಒತ್ತುವರಿ ತೆರವು ಮಾಡಲಾಗಿತ್ತು. ಆದರೆ, ಪ್ರೆಸ್ಟೀಜ್ ಸಂಸ್ಥೆಯು ಆ ಜಾಗವನ್ನು ಮತ್ತೆ ಅತಿಕ್ರಮಣ ಮಾಡಿ ಕಟ್ಟಡ ನಿರ್ಮಿಸಿದೆ
ಎಂ.ಅಣ್ಣಯ್ಯ, ವೇದಿಕೆಯ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.