ಬೆಂಗಳೂರು: ನಟಿ ಶ್ರುತಿ ಹಾಗೂ ಪತ್ರಕರ್ತ ಚಂದ್ರಚೂಡ ಅವರ ವಿವಾಹವನ್ನು ಅಸಿಂಧುಗೊಳಿಸಬೇಕೆಂದು ಕೋರಿ ಚಂದ್ರಚೂಡ ಅವರ ಮೊದಲನೇ ಪತ್ನಿ ಮಂಜುಳಾ ಕೌಟುಂಬಿಕ ನ್ಯಾಯಾಲಯಕ್ಕೆ ಶುಕ್ರವಾರ ಅರ್ಜಿ ಸಲ್ಲಿಸಿದ್ದಾರೆ.
`ಹಿಂದೂ ವಿವಾಹ ಕಾಯ್ದೆಯ ಪ್ರಕಾರ ಮೊದಲನೇ ಪತ್ನಿಯ ಅನುಮತಿ ಇಲ್ಲದೆ ಎರಡನೇ ಮದುವೆಯಾಗುವಂತಿಲ್ಲ. ಅಲ್ಲದೇ ನನಗೆ ವಿಚ್ಛೇದನವನ್ನೂ ನೀಡದೇ ಚಂದ್ರಚೂಡ ಅವರು ಎರಡನೇ ಮದುವೆಯಾಗಿರುವುದು ಕಾನೂನು ಬಾಹಿರ. ಹೀಗಾಗಿ ಈ ಮದುವೆಯನ್ನು ಅಸಿಂಧುಗೊಳಿಸಬೇಕು' ಎಂದು ಮಂಜುಳಾ ಅರ್ಜಿಯಲ್ಲಿ ಕೋರಿದ್ದಾರೆ.
`ಚಂದ್ರಚೂಡ ಅವರಿಗೆ ವಿಚ್ಛೇದನ ನೀಡಲು ಇಷ್ಟವಿಲ್ಲ. ಅವರು ಮತ್ತೆ ನನ್ನ ಬಳಿ ಬರಬಹುದು ಎಂಬ ನಂಬಿಕೆಯಿತ್ತು. ಆದರೆ, ಅವರು ಎರಡನೇ ಮದುವೆಯಾಗುವ ಮೂಲಕ ಹಿಂದೂ ವಿವಾಹ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ' ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಚಂದ್ರಚೂಡ, `ಮಂಜುಳಾ ಕಳೆದ 15 ವರ್ಷಗಳಿಂದ ನನ್ನಿಂದ ದೂರವಾಗಿದ್ದಾಳೆ. ಸಂಧಾನದ ಮೂಲಕ ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂದು ಹಲವು ಬಾರಿ ಹೇಳಿದ್ದೆ. ಈಗ ಈ ವಿಚಾರ ನ್ಯಾಯಾಲಯದ ಮುಂದಿದೆ.
ನ್ಯಾಯಾಲಯ ನೀಡುವ ತೀರ್ಪನ್ನು ಗೌರವಿಸುತ್ತೇನೆ' ಎಂದಿದ್ದಾರೆ.ನಗರ ಕೌಟುಂಬಿಕ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.