ADVERTISEMENT

ಮೌಲ್ಯದ ಹಿಂದೆ ಹೋದರೆ ಹಣ ಬರುತ್ತದೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 19:45 IST
Last Updated 18 ಫೆಬ್ರುವರಿ 2012, 19:45 IST

ಯಲಹಂಕ: `ಯಾವುದೇ ಕೆಲಸ ಮಾಡಿದರೂ ಮೌಲ್ಯಕ್ಕಾಗಿ ದುಡಿಯಬೇಕೆ ಹೊರತು ಹಣಕ್ಕಾಗಿ ಅಲ್ಲ. ಮೌಲ್ಯದ ಹಿಂದೆ ಹೋದಾಗ ತಾನಾಗಿಯೆ ಹಣ ಬರುತ್ತದೆ~ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಸುಧಾ ಮೂರ್ತಿ ಹೇಳಿದರು.

ಇಲ್ಲಿನ ಶೇಷಾದ್ರಿಪುರ ಪ್ರಥಮದರ್ಜೆ ಕಾಲೇಜಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣೆ ಉಪನ್ಯಾಸಕರ ಪರಿಷತ್ ಸಹ ಯೋಗದಲ್ಲಿ ಆಯೋಜಿಸಿದ್ದ `ನಿರ್ವಹಣೆ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಇತ್ತೀಚಿನ ಬೆಳವಣಿಗಳು ಮತ್ತು ಬದಲಾವಣೆ~ ಕುರಿತ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಛಲದಿಂದ ಯಶಸ್ಸನ್ನು ಸಾಧಿಸಬೇಕು. ಹಣ ಕೆಲವು ವಿಷಯಗಳಿಗೆ ಮುಖ್ಯ ಎನಿಸಬಹುದಾದರೂ ಅದೇ ಸರ್ವಸ್ವವಲ್ಲ ಎಂದು ಹೇಳಿದರು.

ವಿದ್ಯಾರ್ಥಿಗಳು ಕಾಲೇಜಿನಲ್ಲಿ ದೊರೆಯುವ ಸೌಲಭ್ಯಗಳು, ಉತ್ತಮ ಶಿಕ್ಷಕರ ಮಾರ್ಗದರ್ಶನ ಹಾಗೂ ಒಡನಾಟದಿಂದ ಜೀವನದಲ್ಲಿ ಕಂಡ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.

  ಶೇಷಾದ್ರಿಪುರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಆರ್. ಪಂಡಿತಾರಾಧ್ಯ  ಅಧ್ಯಕ್ಷತೆ ವಹಿಸಿದ್ದರು. ಗೌರವ ಪ್ರಧಾನ ಕಾರ್ಯದರ್ಶಿ ಡಾ. ವೂಡೆ.ಪಿ.ಕೃಷ್ಣ, ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ಸದಸ್ಯ ಶ್ರೀನಿವಾಸ ಕಸಬೆ, ಬೆಂಗಳೂರು ವಿವಿ ವಾಣಿಜ್ಯಶಾಸ್ತ್ರ ಉಪನ್ಯಾಸಕರ ಪರಿಷತ್ ಅಧ್ಯಕ್ಷ ಡಾ.ಕೆ.ರಾಮಚಂದ್ರ ಮೊದಲಾದವರು ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ.ಎಂ.ಪ್ರಕಾಶ್ ಸ್ವಾಗತಿಸಿ, ಶೇಷಾದ್ರಿಪುರ ವ್ಯವಹಾರಿಕ ಅಧ್ಯಯನ ಕೇಂದ್ರ ನಿರ್ದೇಶಕ ಡಾ.ಡಿ.ಕೆ. ಮೂರ್ತಿ ವಂದಿಸಿದರು. 

 ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಕಂಪನಿಗಳ ಅಧಿಕಾರಿಗಳು ಭಾಗವಹಿಸಿದ್ದು, `ನಿರ್ವಹಣೆ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಇತ್ತೀಚಿನ ಬೆಳವಣಿಗಳು ಮತ್ತು ಬದಲಾವಣೆ~ ಕುರಿತಂತೆ ಪ್ರಬಂಧಗಳನ್ನು  ಮಂಡಿಸಲಿದ್ದಾರೆ. 

 ಮಂಡನೆಯಾದ ಪ್ರಬಂದ ಗಳನ್ನು ಕಿರು ಹೊತ್ತಿಗೆಯಾಗಿ ಹೊರತರುವ ಉದ್ದೇಶವಿದ್ದು,  ಮುಂದೆ ಇದು ಪರಾಮರ್ಶನ ಗ್ರಂಥವಾಗಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸಹಕಾರಿ ಯಾಗಲಿದೆ ಎಂದು ಕಾರ್ಯಾಗಾರದ ಆಯೋಜಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.