ADVERTISEMENT

ಯಲಹಂಕ, ಕೆ.ಆರ್. ಪುರದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 19:30 IST
Last Updated 8 ಫೆಬ್ರುವರಿ 2012, 19:30 IST


ಬೆಂಗಳೂರು: `ಸದನದಲ್ಲಿ ಸೆಕ್ಸ್ ಫಿಲಂ ವೀಕ್ಷಿಸುವ ಮೂಲಕ ಇಬ್ಬರು ಮಾಜಿ ಸಚಿವರು ವಿಧಾನಸಭೆಯ ಪಾವಿತ್ರ್ಯವನ್ನು ಹಾಳು ಮಾಡಿದ್ದಾರೆ~ ಎಂದು ಆರೋಪಿಸಿದ ಕಾಂಗ್ರೆಸ್ ಕಾರ್ಯಕರ್ತರು ಯಲಹಂಕ, ಕೃಷ್ಣರಾಜಪುರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಕೃಷ್ಣರಾಜಪುರ ವರದಿ: ಕ್ಷೇತ್ರ ಘಟಕದ ಕಾಂಗ್ರೆಸ್ ಕಾರ್ಯಕರ್ತರು ಹೊರಮಾವು ವರ್ತುಲ ರಸ್ತೆಯ ಬಳಿ ಪ್ರತಿಭಟನೆ ನಡೆಸಿದರು. `ಜನಪರ ಆಡಳಿತ ನೀಡುವ ಬದಲು ಬಿಜೆಪಿಯ ಸಚಿವರು, ಹಗರಣಗಳಲ್ಲಿ ಮುಳುಗೇಳುತ್ತಿದ್ದಾರೆ. ಕಳಂಕಿತ ಜನಪ್ರತಿನಿಧಿಗಳಿಂದ ಜನರ ರಕ್ಷಣೆ ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ವಜಾ ಮಾಡಬೇಕು~ ಎಂದು ಪಕ್ಷದ ಯುವ ಕ್ಷೇತ್ರ  ಘಟಕದ ಅಧ್ಯಕ್ಷ ಎ.ಎಸ್.ರವಿಕುಮಾರ್ ಆಗ್ರಹಿಸಿದರು. ವಾರ್ಡ್ ಅಧ್ಯಕ್ಷ ಆರ್.ಪ್ರಕಾಶ್ ಮತ್ತಿತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಯಲಹಂಕ ವರದಿ: ಸೆಕ್ಸ್ ಫಿಲಂ ವೀಕ್ಷಣೆ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ ಕೆಂಪೇಗೌಡ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಮಾಜಿ ಸಚಿವರಾದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ್ ಹಾಗೂ ಕೃಷ್ಣ ಪಾಲೇಮಾರ್ ಅವರ ಪ್ರತಿಕೃತಿಗಳನ್ನು ದಹಿಸಿದ ಪ್ರತಿಭಟನಾಕಾರರು, ಕೆಲ ಕಾಲ ರಸ್ತೆತಡೆ ನಡೆಸಿದರು. ಇದರಿಂದ ಈ ಭಾಗದ ವಾಹನ ಸಂಚಾರದಲ್ಲಿ ಕೆಲಕಾಲ ವ್ಯತ್ಯಯ ಉಂಟಾಗಿತ್ತು.

`ಬಿಜೆಪಿಗೆ ಸರ್ಕಾರ ನಡೆಸಲು ನೈತಿಕ ಹಕ್ಕಿಲ್ಲ. ವಿಧಾನಸಭೆ ವಿಸರ್ಜಿಸಿ ರಾಜೀನಾಮೆ ನೀಡಿರುವ ಮೂವರು ಸಚಿವರನ್ನು ಶಾಸಕ ಸ್ಥಾನದಿಂದಲೂ ಅನರ್ಹಗೊಳಿಸಬೇಕು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಬೇಕು~ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕೆಪಿಸಿಸಿ ಸದಸ್ಯ ಸಿ.ವೆಂಕಟೇಶ್, ಯಲಹಂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಬಿ. ಬಾಷಾ, ಕಾಂಗ್ರೆಸ್ ಮುಖಂಡರಾದ ಗೋಪಾಲಕೃಷ್ಣ, ಎನ್.ಎಂ. ಶ್ರೀನಿವಾಸ್, ರಾಜ್‌ಕುಮಾರ್, ಕಾಕೋಳು ಲಕ್ಕಪ್ಪ, ಚಾಂದ್‌ಪಾಷಾ, ಶ್ರೀಧರ್, ಎನ್.ತಿಮ್ಮರಾಜು, ರಮೇಶ್ ಮೊದಲಾದವರು ಭಾಗವಹಿಸಿದ್ದರು.

ಹೊಸಕೋಟೆ ವರದಿ: ಸದನದ ಕಲಾಪ ನಡೆಯುತ್ತಿದ್ದಾಗ ನೀಲಿ ಚಿತ್ರವನ್ನು ನೋಡುವುದರ ಮೂಲಕ ಸದನದ ಪಾವಿತ್ರ್ಯವನ್ನು ಹಾಳುಮಾಡಿದ ಸಚಿವರಾದ ಲಕ್ಷ್ಮಣ ಸವದಿ ಹಾಗೂ ಸಿ.ಸಿ.ಪಾಟೀಲ್ ಅವರನ್ನು ಈ ಕೂಡಲೇ ವಿಧಾನಸಭಾ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸುವಂತೆ ಅಖಿಲ ಭಾರತ ವಕೀಲರ ಸಂಘದ ತಾಲ್ಲೂಕು ಸಮಿತಿ ಅಧ್ಯಕ್ಷ ಹರೀಂದ್ರ, ತಾಲ್ಲೂಕು ಶಾಖೆ ಡಿವೈಎಫ್‌ಐ ಅಧ್ಯಕ್ಷ ಎನ್.ಶ್ರೆನಿವಾಸಚಾರ್ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.