ಬೆಂಗಳೂರು: ಯುಗಾದಿ ಹಬ್ಬ ಹಾಗೂ ರಜಾ ದಿನಗಳ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಬೆಳೆಸುವ ನಿರೀಕ್ಷೆಯಿದ್ದು, ನಗರದ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಸಿಟಿ ರೈಲು ನಿಲ್ದಾಣದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವುದರಿಂದ ನಿಗದಿ ಮಾಡಿರುವ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸಂಚಾರಿ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಧನ್ವಂತರಿ ರಸ್ತೆ, ರೈಲು ನಿಲ್ದಾಣ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಪ್ಲಾಟ್ಫಾರಂ ರಸ್ತೆ ಮತ್ತು ಖೋಡ್ಸೆ ಜಂಕ್ಷನ್ ಈ ರಸ್ತೆಗಳಲ್ಲಿ ಎಲ್ಲಾ ಖಾಸಗಿ ವಾಹನಗಳ ನಿಲುಗಡೆಯನ್ನು ಗುರುವಾರ ನಿಷೇಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೈಸೂರು, ಕೊಡಗು ಮತ್ತು ಕೇರಳ ಹೋಗುವ ಎಲ್ಲಾ ಪ್ರಯಾಣಿಕರು ಮೈಸೂರು ರಸ್ತೆಯ ಬಸ್ ನಿಲ್ದಾಣದಿಂದ ಹೊರಡಬೇಕು ಹಾಗೂ ತಮಿಳುನಾಡು ಕಡೆಗೆ ಹೋಗುವ ಬಸ್ಗಳು ಶಾಂತಿನಗರ ಬಸ್ ನಿಲ್ದಾಣದಿಂದ ತೆರಳಲಿದ್ದು ಪ್ರಯಾಣಿಕರು ಅಲ್ಲಿಯೇ ಹೋಗಿ ಬಸ್ಗಳ ಸೇವೆ ಪಡೆಯಬೇಕು. ದಾವಣಗೆರೆ ಹೋಗುವವರು ಚಿಕ್ಕಲಾಲ್ಬಾಗ್ ಬಸ್ ನಿಲ್ದಾಣದಿಂದ ಹೊರಡಬೇಕು ಎಂದಿದ್ದಾರೆ.
ರೈಲು ಹಾಗೂ ಬಸ್ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು ಆಟೊ ಅಥವಾ ಬಿಎಂಟಿಸಿ ಬಸ್ಗಳಲ್ಲಿ ಸಂಚಾರ ಮಾಡಬೇಕು ಹಾಗೂ ವಾಹನ ಸವಾರರು ಗುರುವಾರ ಸಂಜೆ ನಾಲ್ಕು ಗಂಟೆಯಿಂದ ರಾತ್ರಿ 11 ಗಂಟೆವರೆಗೆ, ಕೆ.ಜಿ. ರಸ್ತೆ, ಗುಡ್ಶೆಡ್ ರಸ್ತೆ, ಕೃಷ್ಣ ಫ್ಲೋರ್ಮಿಲ್ ರಸ್ತೆ, ಪ್ಲಾಟ್ಫಾರಂ ರಸ್ತೆಗಳಲ್ಲಿ ಸಂಚಾರ ಮಾಡದಂತೆ ಪೊಲೀಸರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.