ಬೆಂಗಳೂರು: ದೇವನಹಳ್ಳಿ ಹಾಗೂ ನಗರದ ಮೈಕೊ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಯುವಕ ಸೇರಿದಂತೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೇವನಹಳ್ಳಿಯ ಪಟೇಲ್ ಜೊಳ್ಳಪ್ಪ ರಸ್ತೆ ನಿವಾಸಿ ನಲ್ಲೂರಪ್ಪ ಎಂಬುವರ ಪುತ್ರ ಹರೀಶ್ (25) ಆತ್ಮಹತ್ಯೆ ಮಾಡಿಕೊಂಡವರು. ಪಿಯುಸಿ ಓದಿದ್ದ ಹರೀಶ್ ಮೊದಲು ಎಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿದ್ದರು.
ಎಂಟು ತಿಂಗಳಿಂದ ಮಾನಸಿಕ ಅಸ್ವಸ್ಥರಾಗಿದ್ದರಿಂದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಬೆಳಿಗ್ಗೆ 8.30ರ ಸುಮಾರಿಗೆ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಆತ್ಮಹತ್ಯೆ
ಮಹಿಳೆಯೊಬ್ಬರು ಕೀಟನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಕೊ ಲೇಔಟ್ನಲ್ಲಿ ನಡೆದಿದೆ.
ಮೈಕೊ ಲೇಔಟ್ ನಿವಾಸಿ ದುರ್ಗಪ್ಪ ಅವರ ಪತ್ನಿ ವೆಂಕಟಲಕ್ಷ್ಮಿ (36) ಆತ್ಮಹತ್ಯೆ ಮಾಡಿಕೊಂಡವರು. ಛತ್ರಿ ಹಾಗೂ ಸ್ಟೌ ರಿಪೇರಿ ಕೆಲಸ ಮಾಡುತ್ತಿದ್ದ ದಂಪತಿ ಮದ್ಯವ್ಯಸನಿಯಾಗಿದ್ದರು.
ಕುಡಿದ ಮತ್ತಿನಲ್ಲಿದ್ದ ಅವರು ಮಂಗಳವಾರ ರಾತ್ರಿ ಜಗಳವಾಡಿಕೊಂಡಿದ್ದು, ಇಬ್ಬರೂ ಕೀಟನಾಶಕ ಕುಡಿದಿದ್ದಾರೆ ಎಂದು ಪೊಲೀಸರು ತಿಳಿಸಿದರು. ಕೂಡಲೇ ಸ್ಥಳೀಯರು ಅವರನ್ನು ವಿಕ್ಟೋರಿಯಾಆಸ್ಪತ್ರೆಗೆ ಸೇರಿಸಿದ್ದಾರೆ. ಬುಧವಾರ ಮಧ್ಯಾಹ್ನ ವೆಂಕಟಲಕ್ಷ್ಮಿ ಮೃತಪಟ್ಟಿದ್ದು, ದುರ್ಗಪ್ಪ ಪ್ರಾಣಪಾಯದಿಂದ ಪಾರಾಗಿದ್ದಾರೆ. ಮೈಕೊ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಸ್ಥ ವ್ಯಕ್ತಿ ಸಾವು
ಔಷಧಿ ಎಂದು ಭಾವಿಸಿ ಕೀಟ ನಾಶಕ ಕುಡಿದು ಅಸ್ವಸ್ಥಗೊಂಡಿದ್ದ ವ್ಯಕ್ತಿಯೊಬ್ಬರು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.
ಮೈಕೊ ಲೇಔಟ್ ಸಮೀಪದ ಬಿಳೇಕಹಳ್ಳಿ ನಿವಾಸಿ ಚಂದ್ರಪ್ಪ (56) ಮೃತಪಟ್ಟವರು. ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಅವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು, ಮಾರ್ಚ್ 17ರಂದು ಕಪಾಟಿನ ಲಿದ್ದ ಔಷಧಿ ಬದಲಾಗಿ ಕೀಟನಾಶಕ ಕುಡಿದಿದ್ದರು ಅಸ್ವಸ್ಥಗೊಂಡಿದ್ದ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಮಂಗಳವಾರ ರಾತ್ರಿ ಅವರು ಸಾವನ್ನಪ್ಪಿದರು ಎಂದು ಪೊಲೀಸರು ಹೇಳಿದರು. ಮೈಕೊ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.