ಬೆಂಗಳೂರು: `ಸರ್ಕಾರಗಳು ಸಾಮಾನ್ಯವಾಗಿ ಯೋಗ್ಯ ವ್ಯಕ್ತಿಗಳನ್ನು ಗುರುತಿಸುವುದಿಲ್ಲ. ಸಂಘ-ಸಂಸ್ಥೆಗಳೇ ನೈಜ ಸಾಧಕರನ್ನು ಗುರುತಿಸಿ, ಸನ್ಮಾನಿಸುವ ಕೆಲಸ ಮಾಡಬೇಕು' ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಹೇಳಿದರು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ನೌಕರರ ಸಂಘ ಇತ್ತೀಚೆಗೆ ಏರ್ಪಡಿಸಿದ್ದ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಸರ್ಕಾರದ ಪ್ರಶಸ್ತಿಗಳನ್ನು ಸಾಮಾನ್ಯವಾಗಿ ಅಧಿಕಾರಸ್ಥರು ತಮಗೆ ಇಷ್ಟಬಂದವರಿಗೆ ಕೊಡುತ್ತಾರೆ. ಸಮಾಜದ ನಡುವೆ ಸದ್ದಿಲ್ಲದೆ ಸೇವೆ ಮಾಡುವವರಿಗೆ ಪ್ರೋತ್ಸಾಹ ನೀಡಲು ಸಂಘ-ಸಂಸ್ಥೆಗಳೇ ಮುಂದಾಗಬೇಕು' ಎಂದು ತಿಳಿಸಿದರು.
ಗುಪ್ತಾ ಮಾತನಾಡಿ `ನೀರು ಪೂರೈಕೆ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನಗಳು ನಡೆದಿದ್ದು, ಸಿಬ್ಬಂದಿ ಅಗತ್ಯ ಸಹಕಾರ ನೀಡಬೇಕು' ಎಂದು ಮನವಿ ಮಾಡಿದರು. ಕನ್ನಡದ ಕಲಿಕೆ ಖುಷಿ ನೀಡಿದೆ ಎಂದ ಅವರು, ಎಲ್ಲರೂ ಕನ್ನಡವನ್ನೇ ಸಂವಹನ ಭಾಷೆಯಾಗಿ ಬಳಸಬೇಕು ಎಂದು ಸಲಹೆ ನೀಡಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಕಲಾವಿದ ರಂಗಸ್ವಾಮಿ, ಕವಿ ಅಸದುಲ್ಲಾ ಬೇಗ್, ನಟ ಪಂಕಜ್, ನೌಕರರ ಸಂಘದ ಅಧ್ಯಕ್ಷ ರುದ್ರೇಗೌಡ, ಪ್ರಧಾನ ಕಾರ್ಯದರ್ಶಿ ಕೆ.ಚಿಕ್ಕವೀರಯ್ಯ, ಬಿಡಬ್ಲ್ಯುಎಸ್ಎಸ್ಬಿ ಮುಖ್ಯ ಆಡಳಿತಾಧಿಕಾರಿ ಕೆ.ಎಸ್. ಮಂಜುನಾಥ್, ಆರ್ಥಿಕ ಸಲಹೆಗಾರ ಜಮೀರ್ ಅಹಮದ್ಖಾನ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.