ಬೆಂಗಳೂರು: ಮೆಟ್ರೊ ಮಾರ್ಗಗಳು ಹಾದು ಹೋಗಿರುವ ಕಡೆ ರಸ್ತೆ, ಪಾದಚಾರಿ ಮಾರ್ಗ ಮತ್ತು ರಸ್ತೆ ಬದಿ ಮೋರಿಗಳು ಹಾಳಾಗಿದ್ದು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಾಕಷ್ಟು ತೊಂದರೆ ಆಗುತ್ತಿದೆ.
ಆದ್ದರಿಂದ ಎಲ್ಲ ಸರ್ಕಾರಿ ಪಾಲುದಾರ ಸಂಸ್ಥೆಗಳು ನಗರದ ಮೂಲಸೌಕರ್ಯ ಉತ್ತಮಗೊಳಿಸಲು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಮೇಯರ್ ಡಿ. ವೆಂಕಟೇಶಮೂರ್ತಿ ಸೂಚಿಸಿದರು.
ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸರ್ಕಾರದ ಎಲ್ಲ ಪಾಲುದಾರ ಸಂಸ್ಥೆಗಳ ಸಮನ್ವಯ ಸಭೆ ಕರೆದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸೂಚಿಸಿದ್ದ ಹಿನ್ನೆಲೆಯಲ್ಲಿ ಮೇಯರ್ ಸೋಮವಾರ ಈ ಸಭೆ ನಡೆಸಿದರು.
ಮೆಟ್ರೊ ರೀಚ್-1 ಕಾಮಗಾರಿ ಪೂರ್ಣಗೊಂಡ ಹಲಸೂರು, ಇಂದಿರಾನಗರ, ಬೈಯ್ಯಪ್ಪನಹಳ್ಳಿ, ಸಿಎಂಎಚ್ ರಸ್ತೆ ಮುಂತಾದ ಕಡೆ ಇನ್ನು ರಸ್ತೆಗಳು ಸಂಪೂರ್ಣವಾಗಿ ಅಭಿವೃದ್ಧಿಗೊಂಡಿಲ್ಲ. ಮೆಟ್ರೊ ಕಾಮಗಾರಿ ಮುಗಿದು ಒಂದು ವರ್ಷವಾದರೂ ರಸ್ತೆಗಳು ಹಾಗೇ ಉಳಿದಿವೆ. ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ತಕ್ಷಣ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚಿಸಿದರು.
ಮೆಟ್ರೊ ರೀಚ್ 2 ಮತ್ತು 3ರಲ್ಲಿ ಕೂಡ ಆರ್.ವಿ. ರಸ್ತೆ, ಜಯನಗರ, ವಾಣಿ ವಿಲಾಸ ರಸ್ತೆ, ಕನಕಪುರ ರಸ್ತೆಗಳಲ್ಲಿ ಕಾಮಗಾರಿ ಮುಗಿದಿದೆ. ಬೆಸ್ಕಾಂ ಮತ್ತು ಜಲ ಮಂಡಳಿಗಳು ಅಭಿವೃದ್ಧಿಗಾಗಿ ಅಂದಾಜು ಪಟ್ಟಿ ಸಿದ್ಧಪಡಿಸಿವೆ. ಬಿಎಂಆರ್ಸಿಎಲ್ ತಕ್ಷಣ ತನ್ನ ಅರ್ಧಪಾಲು ಹಣ ಕೊಡಬೇಕು. ಬಿಬಿಎಂಪಿ ಅಷ್ಟೇ ಹಣ ತೊಡಗಿಸಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಿದೆ ಎಂದು ಹೇಳಿದರು.
ಎಂ.ಜಿ. ರಸ್ತೆಯಿಂದ ಬೈಯ್ಯಪ್ಪನಹಳ್ಳಿವರೆಗೆ ಮೆಟ್ರೊ ಪಿಲ್ಲರ್ಗಳ ಮೇಲೆ ಹೇರಳವಾಗಿ ಜಾಹೀರಾತು ಫಲಕಗಳನ್ನು ಅಳವಡಿಸಲಾಗಿದೆ. ಬಿಬಿಎಂಪಿಗೆ ಯಾವುದೇ ಶುಲ್ಕ ನೀಡಿಲ್ಲ. ಇದರಿಂದ ಪಾಲಿಕೆಗೆ ಸಾಕಷ್ಟು ನಷ್ಟವಾಗುತ್ತಿದೆ. ಅನುಮತಿ ಇಲ್ಲದೆ ಜಾಹೀರಾತು ಫಲಕ ಹಾಕುವುದರಿಂದ ಅದನ್ನು ಅನಧಿಕೃತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಬಿಎಂಆರ್ಸಿಎಲ್ ಪಾಲಿಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಬೇಕು. ನಿಗದಿತ ತೆರಿಗೆ ಪಾವತಿಸಬೇಕು ಎಂದು ತಿಳಿಸಿದರು.
ಎಂ.ಜಿ. ರಸ್ತೆ, ಸಿಎಂಎಚ್ ರಸ್ತೆ ಮುಂತಾದ ಕಡೆ ಮೆಟ್ರೊ ಮಾರ್ಗದ ಕೆಳಗೆ ಸಾರ್ವಜನಿಕರು ತ್ಯಾಜ್ಯ ಹಾಕುತ್ತಿದ್ದಾರೆ. ಅದನ್ನು ತಡೆಗಟ್ಟಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಪ್ರತಿ ವಾರ ಪ್ರಗತಿ ವರದಿ ನೀಡಲು ಆದೇಶ
ಬೆಂಗಳೂರು: ವಾರ್ಡ್ ಮಟ್ಟದಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಕುರಿತು ಪ್ರತಿ ವಾರ ವರದಿ ನೀಡುವಂತೆ ವಲಯ ಎಂಜಿನಿಯರ್ಗಳಿಗೆ ಬಿಬಿಎಂಪಿ ಆಯುಕ್ತ ರಜನೀಶ್ ಗೋಯಲ್ ಸೂಚಿಸಿದ್ದಾರೆ.
ಸೋಮವಾರ ವಲಯ ಮುಖ್ಯ ಹಾಗೂ ಕಾರ್ಯಪಾಲಕ ಎಂಜಿನಿಯರ್ಗಳ ಸಭೆ ನಡೆಸಿದ ಅವರು, ಈ ಆದೇಶ ಹೊರಡಿಸಿದರು.
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ವಾರ್ಡ್ ಮಟ್ಟದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳಬೇಕಾಗಿದ್ದು, ತ್ವರಿತಗತಿಯಲ್ಲಿ ಅವುಗಳು ಮುಗಿಯುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಕೆರೆಗಳು, ಘನತ್ಯಾಜ್ಯ ನಿರ್ವಹಣೆ, ರಸ್ತೆ ಮೂಲಸೌಕರ್ಯ ಸೇರಿದಂತೆ ಎಲ್ಲ ವಿಭಾಗದ ಮುಖ್ಯ ಎಂಜಿನಿಯರ್ಗಳು ಪ್ರತಿ ಶನಿವಾರ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.
ಅಲ್ಲದೆ ವಾರ್ಡ್ ಮಟ್ಟದಲ್ಲಿ ಪಾದಚಾರಿ ಮಾರ್ಗ, ರಸ್ತೆಗಳ ಅಭಿವೃದ್ಧಿ, ಮೋರಿಗಳ ದುರಸ್ತಿ ಕಾಮಗಾರಿ ಕೈಗೊಳ್ಳುವಾಗ ಕಡ್ಡಾಯವಾಗಿ ತಾಂತ್ರಿಕ ಅನುಮೋದನೆ ಪಡೆಯಬೇಕು ಎಂದು ಆದೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.